ಶ್ರೀನಗರ: ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧಭೂಮಿ ಎಂದೇ ಹೇಳಲಾಗುವ ಸಮುದ್ರ ಮಟ್ಟದಿಂದ 12 ಸಾವಿರ ಅಡಿ ಎತ್ತರದ ಸಿಯಾಚಿನ್ಗೆ ಸೋಮವಾರ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಲ್ಲಿ ಗಡಿ ರಕ್ಷಣೆಗೆ ನಿಯೋಜಿತರಾಗಿರುವ ಯೋಧರ ಜೊತೆಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಕಾಶ್ಮೀರದಲ್ಲಿ ಉಗ್ರವಾದಿಗಳ ವಿರುದ್ಧ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ಶ್ಲಾಘಿಸಿದರು.
ಸಿಯಾಚಿನ್ ಭೇಟಿ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ‘ಇಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಯೋಧರ ಬಗ್ಗೆ ನನಗೆ ಹೆಮ್ಮೆ ಇದೆ. ತಾಯ್ನಾಡಿನ ರಕ್ಷಣೆಗೆ ಅವಿರತ ಶ್ರಮಿಸುತ್ತಿದ್ದಾರೆ. ಸೇನೆಗೆ ಸೇರಿಸುವ ಮೂಲಕ ಮಕ್ಕಳನ್ನು ಇಲ್ಲಿಗೆ ಕಳುಹಿಸಿರುವ ತಂದೆ–ತಾಯಿಯರ ಬಗ್ಗೆಯೂ ಹೆಮ್ಮೆ ಇದೆ. ಅವರಿಗೆ ನಾನು ವೈಯಕ್ತಿಕವಾಗಿ ಕೃತಜ್ಞತಾ ಸಂದೇಶವನ್ನು ಕಳುಹಿಸುತ್ತೇನೆ’ ಎಂದು ಹೇಳಿದರು.
ರಕ್ಷಣಾ ಸಚಿವರ ಭೇಟಿ ಸಂದರ್ಭದಲ್ಲಿ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಕಮಾಂಡರ್ ಲೆಫ್ಟಿನೆಂಟ್ ರಣಬೀರ್ ಸಿಂಗ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.