ADVERTISEMENT

ಚಹಾ ನೀಡಿದ ಉಪಸಭಾಪತಿ; ನಿರಾಕರಿಸಿದ ಸಂಸದರು

ಪಿಟಿಐ
Published 22 ಸೆಪ್ಟೆಂಬರ್ 2020, 5:17 IST
Last Updated 22 ಸೆಪ್ಟೆಂಬರ್ 2020, 5:17 IST
ರಾಜ್ಯಸಭೆಯಲ್ಲಿ ಅಮಾನತುಗೊಂಡು ಸಂಸತ್ತಿನ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಸಂಸದರನ್ನು ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಭೇಟಿ ಮಾಡಿದರು.
ರಾಜ್ಯಸಭೆಯಲ್ಲಿ ಅಮಾನತುಗೊಂಡು ಸಂಸತ್ತಿನ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಸಂಸದರನ್ನು ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಭೇಟಿ ಮಾಡಿದರು.   

ನವದೆಹಲಿ: ರಾಜ್ಯಸಭೆಯಿಂದ ಸೋಮವಾರ ಅಮಾನತುಗೊಂಡ ಎಂಟು ಸಂಸದರು ಸಂಸತ್ತಿನ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದು, ಮಂಗಳವಾರ ಮುಂಜಾನೆ ಪ್ರತಿಭಟನಾ ನಿರತರನ್ನು ರಾಜ್ಯಸಭೆಯ ಉಪಸಭಾಪತಿ ಹರವಂಶಸಿಂಗ್ ಚಹಾ ಸೇವಿಸಲು ಮನವಿ ಮಾಡಿದರು.

ಆದರೆ, ಪ್ರತಿಭಟನಾ ಸಂಸದರು ಉಪಸಭಾಪತಿಯವರ ಚಹಾ ಮತ್ತು ಉಪಹಾರ ಸ್ವೀಕರಿಸಲು ನಿರಾಕರಿಸಿದರು.

ಅಮಾನತುಗೊಂಡ ಸಂಸದರು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯ ಎದುರಿನ ಹುಲ್ಲುಹಾಸಿನ ಮೇಲೆ ರಾತ್ರಿ ಕಳೆದಿದ್ದಾರೆ. ಆಪ್‌ ಸಂಸದ ಸಂಜಯ್ ಸಿಂಗ್‌, ಪ್ರತಿಭಟನೆಯ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ’ತೆರೆದ ಆಕಾಶದ ಕೆಳಗೆ, ಬಾಪುವಿನ ಪ್ರತಿಮೆ ಎದುರುಇಡೀ ರಾತ್ರಿಯನ್ನು ಕಳೆದಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಪ್ರತಿಭಟನಾ ನಿರತರಿಗೆ ಚಹಾಗೆ ಆಹ್ವಾನಿಸಿರುವ ಉಪಸಭಾಪತಿ ಹರಿವಂಶ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ’ನಿನ್ನೆಯಷ್ಟೆ ಅವರ ಮೇಲೆ ದಾಳಿ ಮಾಡಿ, ಅವಮಾನಿಸಿ, ಧರಣಿ ಕುಳಿತವರಿಗೆ ವೈಯಕ್ತಿಕವಾಗಿ ಚಹಾ ನೀಡುತ್ತಿರುವ ಶ್ರೀಹರಿವಂಶ್‌ ಜಿ ಅವರದ್ದು ವಿನಯವಂತ ಮನಸ್ಸು. ಇದು ಅವರಲ್ಲಿರುವ ಹಿರಿತನವನ್ನು ತೋರುತ್ತದೆ. ನಾನು ದೇಶದ ಜನರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ’ಎಂದು ಹೇಳಿದ್ದಾರೆ.

ಮೋದಿ ಅವರ ಟ್ವೀಟ್‌ ಉಲ್ಲೇಖಿಸಿ ಹಿಂದಿಯಲ್ಲಿ ಮರು ಟ್ವೀಟ್ ಮಾಡಿರುವ ಆಪ್ ಸಂಸದ ಸಂಜಯ್ ಸಿಂಗ್, ’ನಾವು ನಮ್ಮಚಹಾಕ್ಕಾಗಿ ಹೋರಾಡುತ್ತಿಲ್ಲ. ನಿಮ್ಮ ಸರ್ಕಾರ ದೇಶದ ರೈತರ ವಿರುದ್ಧವಾಗಿ ತೆಗೆದುಕೊಂಡಿರುವ ತೀರ್ಮಾನವನ್ನು ವಿರೋಧಿಸಿ, ರೈತ ಕಲ್ಯಾಣಕ್ಕಾಗಿ ಹೋರಾಡುತ್ತಿದ್ದೇವೆ. ನಾನು ನಿಮ್ಮ ಚಹಾ ಆತಿಥ್ಯವನ್ನು ಗೌರವದಿಂದ ನಿರಾಕರಿಸುತ್ತಿದ್ದೇನೆ’ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.