ADVERTISEMENT

ರಾಮಮಂದಿರದ ವಿಶೇಷತೆಗಳೇನು, ನಿರ್ಮಾಣ ಜವಾಬ್ದಾರಿ ಯಾರಿಗೆ? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 15:17 IST
Last Updated 7 ಆಗಸ್ಟ್ 2020, 15:17 IST
ಉದ್ದೇಶಿತ ರಾಮ ಮಂದಿರದ ಚಿತ್ರಣ
ಉದ್ದೇಶಿತ ರಾಮ ಮಂದಿರದ ಚಿತ್ರಣ    

ಅಯೋಧ್ಯೆ: ರಾಮ ಮಂದಿರವು ಭೂಕಂಪ ನಿರೋಧಕವಾಗಿರಲಿದ್ದು, ನೈಸರ್ಗಿಕ ವಿಪತ್ತುಗಳನ್ನು ತಾಳಿಕೊಂಡು ಸಾವಿರ ವರ್ಷಗಳ ಕಾಲ ಬಾಳಲಿದೆ, ಎಂದು ದೇವಾಲಯ ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ಟ್ರಸ್ಟ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

ಅಯೋಧ್ಯೆಯ ಕರ್ಸ್ವಾಕ್‌ಪುರಮ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌, ‘ನದಿಗಳಿಗೆ ಕಟ್ಟಲಾಗುವ ಸೇತುವೆಗಳಿಗೆ ಭೂಮಿಯ ಆಳದ ವರೆಗೆ ಕಂಬ (ಪಿಲ್ಲರ್‌)ಗಳನ್ನು ಹಾಕಲಾಗುತ್ತದೆ. ಅದೇ ರೀತಿ ರಾಮ ಮಂದಿರಕ್ಕೂ ಪಿಲ್ಲರ್‌ಗಳನ್ನು ಹಾಕಲಾಗುತ್ತಿದೆ. ಹೀಗಾಗಿ ದೇವಾಲಯವು ಭೂಕಂಪ ನಿರೋಧವಾಗಿರಲಿದೆ. ಅಲ್ಲದೆ, ನೈಸರ್ಗಿಕ ವಿಪತ್ತನ್ನು ತಾಳಿಕೊಂಡು ಮಂದಿರವು ಸಾವಿರ ವರ್ಷಗಳ ಕಾಲ ಇರಲಿದೆ,’ ಎಂದು ಅವರು ತಿಳಿಸಿದರು.

ಅಡಿಪಾಯದ ಯೋಜನೆಯ ರೂಪು ರೇಷೆ ಅಂತಿಮ ಹಂತದಲ್ಲಿದೆ ಎಂದು ದೇಗುಲ ನಿರ್ಮಾಣ ಕಾರ್ಯ ನಿರ್ವಹಿಸಲಿರುವ ‘ಲಾರ್ಸನ್‌ ಮತ್ತು ಟರ್ಬೊ’ ಕಂಪನಿಯು ತಮಗೆ ತಿಳಿಸಿರುವುದಾಗಿ ರಾಯ್‌ ಹೇಳಿದ್ದಾರೆ.

ADVERTISEMENT

‘ಯೋಜನೆಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಸಮ್ಮತಿ ಪಡೆಯುತ್ತೇವೆ. ಶುಲ್ಕವನ್ನು ಪಾವತಿಸುತ್ತೇವೆ. ಯಾವುದೇ ವಿನಾಯಿತಿಗಳನ್ನೂ ನಾವು ಬಯಸುವುದಿಲ್ಲ,’ ಎಂದು ಅವರು ಹೇಳಿದರು.

‘ಭೂಮಿಯನ್ನು ಅಗೆಯುವಾಗ ಮತ್ತು ಸಮತಟ್ಟುಗೊಳಿಸುವಾಗ ನಮಗೆ ಸಿಗುವ ಯಾವುದೇ ಪುರಾತನ ವಸ್ತುಗಳನ್ನು, ಶಿಲ್ಪಗಳನ್ನು ದೇವಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು,’ ಎಂದು ಚಂಪತ್ ರೈ ಹೇಳಿದರು.

‘ಟ್ರಸ್ಟ್ ತನ್ನ ಬ್ಯಾಂಕ್ ಖಾತೆಯಲ್ಲಿ ಸದ್ಯ 42 ಕೋಟಿ ರೂಗಳನ್ನು ಹೊಂದಿದೆ. ಜನರು ₹1 ನಿಂದ ₹1 ಕೋಟಿಯ ವರೆಗೆ ಟ್ರಸ್ಟ್‌ಗೆ ದೇಣಿಗೆ ನೀಡಿದ್ದಾರೆ,’ ಎಂದು ಅವರು ಮಾಹಿತಿ ನೀಡಿದರು.

‘ದೇವಾಲಯ ನಿರ್ಮಿಸಬೇಕೆಂಬ ಆಂದೋಲನದಲ್ಲಿ ಭಾರತದ ಸುಮಾರು 15 ರಿಂದ 20 ಸಾವಿರ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಆದರೆ ಭೂಮಿಪೂಜೆ ಸಮಾರಂಭಕ್ಕೆ ಅವರೆಲ್ಲರನ್ನೂ ಆಹ್ವಾನಿಸಲು ಸಾಧ್ಯವಾಗಲಿಲ್ಲ,’ ಎಂದು ಬೇಸರ ವ್ಯಕ್ತಪಡಿಸಿದ ಚಂಪಕ್‌, ಭೂಮಿಪೂಜೆಗೆ ಅಯೋಧ್ಯೆಯ ಹೊರಗಿನಿಂದ ಕೇವಲ 90 ಮಂದಿ ಧಾರ್ಮಿಕ ನಾಯಕರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.