ADVERTISEMENT

ಕೋವಿಡ್‌ ಚಿಕಿತ್ಸೆಗೆ ಪತಂಜಲಿ ಔಷಧ: ಯೋಗ ಗುರು ಬಾಬಾ ರಾಮ್‌ದೇವ್

7 ದಿನದಲ್ಲಿ ಶೇ 100ರಷ್ಟು ಸಕಾರಾತ್ಮಕ ಫಲಿತಾಂಶ

ಪಿಟಿಐ
Published 23 ಜೂನ್ 2020, 19:45 IST
Last Updated 23 ಜೂನ್ 2020, 19:45 IST
ಕೋವಿಡ್‌ ಚಿಕಿತ್ಸೆಗೆ ಸಂಬಂಧಿತ ಆಯುರ್ವೇದ ಔಷಧದ ಕಿಟ್ ಅನ್ನು ಬಾಬಾ ರಾಮ್‌ದೇವ್ ಬಿಡುಗಡೆ ಮಾಡಿದರು. ಪತಂಜಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ (ಬಲಭಾಗ) ಅವರು ಇದ್ದರು
ಕೋವಿಡ್‌ ಚಿಕಿತ್ಸೆಗೆ ಸಂಬಂಧಿತ ಆಯುರ್ವೇದ ಔಷಧದ ಕಿಟ್ ಅನ್ನು ಬಾಬಾ ರಾಮ್‌ದೇವ್ ಬಿಡುಗಡೆ ಮಾಡಿದರು. ಪತಂಜಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ (ಬಲಭಾಗ) ಅವರು ಇದ್ದರು   

ಹರಿದ್ವಾರ/ನವದೆಹಲಿ: ಕೊರೊನಾ ಸೋಂಕುಗೆ ಚಿಕಿತ್ಸೆ ನೀಡಬಲ್ಲ ಆಯುರ್ವೇದ ಔಷಧಿಯನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಯೋಗ ಗುರು ರಾಮದೇವ್ ನೇತೃತ್ವದ ಪತಂಜಲಿ ಸಂಸ್ಥೆ ಹೇಳಿಕೊಂಡಿದೆ.

ಜಗತ್ತಿನಾದ್ಯಂತ ವಿಜ್ಞಾನಿಗಳು ಕೋವಿಡ್‌–19ಕ್ಕೆ ಪರಿಣಾಮಕಾರಿ ಔಷಧ ಪತ್ತೆ ಹಚ್ಚಲು ಕಸರತ್ತು ನಡೆಸಿರುವಾಗಲೇ ಪತಂಜಲಿ ಸಂಸ್ಥೆ ಈ ಹೇಳಿಕೆ ನೀಡಿದೆ. ಔಷಧದ ಪ್ರಯೋಗ ನಡೆದಿದ್ದು, ಶೇ 100ರಷ್ಟು ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು ಪ್ರತಿಪಾದಿಸಿದೆ.

‘ಕೊರೊನಿಲ್‌’ ಮತ್ತು ‘ಸ್ವಸರಿ’ ಹೆಸರಿನ ಈ ಔಷಧಗಳನ್ನು ಕೋವಿಡ್‌ ಪೀಡಿತ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ.ಈ ಔಷಧಗಳು ಏಳು ದಿನಗಳಲ್ಲಿ ಶೇ 100ರಷ್ಟು ಫಲಿತಾಂಶ ನೀಡಿವೆ’ ಎಂದು ರಾಮ್‌ದೇವ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕೊರೊನಾ ಸೋಂಕು ಬಾಧಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿಯೂ ಈ ಔಷಧವನ್ನು ಸೇವಿಸಬಹುದು. ಇದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಿಯಲ್ಲ. ಕೊರೊನಾ ಸೋಂಕು ನಿವಾರಿಸುವ ಔಷಧ’ ಎಂದು ಅವರು ಹೇಳಿದರು.

ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು, ‘ಕೊರೊನಾ ಔಷಧದ ಕಿಟ್‌ಗೆ ₹ 545 ಬೆಲೆ ನಿಗದಿಪಡಿಸಲಾಗಿದೆ. 30 ದಿನಗಳ ಅವಧಿಗೆ ಆಗುವಷ್ಟು ಔಷಧಗಳನ್ನು ಈ ಕಿಟ್‌ ಒಳಗೊಂಡಿರುತ್ತದೆ’ ಎಂದರು.

ಹರಿದ್ವಾರ ಮೂಲದ ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆರ್ಯುವೇದ ಲಿಮಿಟೆಡ್‌ ಈ ಔಷಧ ಉತ್ಪಾದಿಸಿದೆ. ಪತಂಜಲಿ ಸಂಶೋಧನಾ ಸಂಸ್ಥೆ ಮತ್ತು ಜೈಪುರ ಮೂಲಕ ರಾಷ್ಟ್ರೀಯ ವೈದ್ಯ ವಿಜ್ಞಾನ ಸಂಸ್ಥೆ (ನಿಮ್ಸ್) ಪಾಲುದಾರಿಕೆಯಡಿ ಸಂಶೋಧನೆ ನಡೆದಿತ್ತು.

‘ಸುಮಾರು 280 ಕೊರೊನಾ ಸೋಂಕಿತರ ಮೇಲೆ ಇದನ್ನು ಪ್ರಯೋಗಿಸಲಾಗಿತ್ತು. ಮೂರು ದಿನದಲ್ಲಿ ಶೇ 69ರಷ್ಟು ಚೇತರಿಕೆ ಕಂಡುಬಂದಿತು’ ಎಂದೂ ರಾಮ್‌ ದೇವ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿಮ್ಸ್‌ ನಿರ್ದೇಶಕ ಡಾ.ಬಲಬೀರ್‌ ಸಿಂಗ್ ತೋಮರ್‌ ಹಾಗೂ ಸಂಶೋಧನೆಯಲ್ಲಿ ಭಾಗಿಯಾಗಿದ್ದ ಅಲೋಪಥಿ ಮತ್ತು ಆರ್ಯುವೇದ ಪರಿಣತರು ಹಾಜರಿದ್ದರು.

ವಿವರ ಕೊಡಿ, ಜಾಹೀರಾತು ಕೊಡಬೇಡಿ

‘ಕೋವಿಡ್‌–19 ಗುಣಪಡಿಸಲಿದೆ ಎಂದು ಹೇಳಿಕೊಂಡಿರುವ ಔಷಧ ವಿವರಗಳನ್ನು ಆದಷ್ಟು ಬೇಗ ಕೊಡಬೇಕು ಹಾಗೂ ಪರಿಶೀಲನೆಯವರೆಗೂ ಈ ಉತ್ಪನ್ನ ಕುರಿತು ಜಾಹೀರಾತು ನೀಡಬಾರದು’ ಎಂದು ಆಯುಷ್‌ ಸಚಿವಾಲಯ ತಾಕೀತು ಮಾಡಿದೆ.

ಕೊರೊನಿಲ್‌ ಮತ್ತು ಸ್ವಸರಿ ಔಷಧ ಬಿಡುಗಡೆ ಮಾಡಿದ್ದ ಪತಂಜಲಿ, ಇದು ಕೋವಿಡ್ ಗುಣಪಡಿಸಲಿದೆ ಎಂದು ಹೇಳಿತ್ತು. ಆದರೆ ಸಚಿವಾಲಯ, ‘ಈ ಪ್ರತಿಪಾದನೆಯ ಹಿಂದಿನ ವಿವರ ಹಾಗೂ ವೈಜ್ಞಾನಿಕ ಅಧ್ಯಯನದ ಮಾಹಿತಿ ಇಲ್ಲ‘ ಎಂದು ಹೇಳಿದೆ.

ಔಷಧದ ಪ್ರಯೋಗ ನಡೆದ ಆಸ್ಪತ್ರೆ, ಸ್ಥಳ, ಬಳಸಲಾದ ಔಷಧದ ಪ್ರಮಾಣ ಕುರಿತ ವಿವರಗಳನ್ನು ಒದಗಿಸಬೇಕು ಎಂದು ಸಚಿವಾಲಯವು ಪತಂಜಲಿ ಸಂಸ್ಥೆಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.