ADVERTISEMENT

ಪವಿತ್ರ ಜಲ ಸಿಂಪಡಿಸಿ ಹಿಂದೂ ಧರ್ಮಕ್ಕೆ ಸ್ವಾಗತಿಸಲು ನಿರ್ಧಾರ: ಟಿಟಿಡಿ

ತಿರುಮಲ: ‘ಧಾರ್ಮಿಕ ಸದಸ್‌’ಗೆ ತೆರೆ * ಮತಾಂತರ ತಡೆಯುವ ನಿಟ್ಟಿನಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 22:30 IST
Last Updated 5 ಫೆಬ್ರುವರಿ 2024, 22:30 IST
<div class="paragraphs"><p>ತಿರುಮಲದಲ್ಲಿ ನಡೆದ ‘ಧಾರ್ಮಿಕ ಸದಸ್‌’ನ ಸಮಾರೋಪ ಕಾರ್ಯಕ್ರಮದಲ್ಲಿ ಟಿಟಿಡಿ ಮುಖ್ಯಸ್ಥ ಭೂಮನ ಕರುಣಾಕರ ರೆಡ್ಡಿ ಅವರು ಮಾತನಾಡಿದರು&nbsp; &nbsp;</p></div>

ತಿರುಮಲದಲ್ಲಿ ನಡೆದ ‘ಧಾರ್ಮಿಕ ಸದಸ್‌’ನ ಸಮಾರೋಪ ಕಾರ್ಯಕ್ರಮದಲ್ಲಿ ಟಿಟಿಡಿ ಮುಖ್ಯಸ್ಥ ಭೂಮನ ಕರುಣಾಕರ ರೆಡ್ಡಿ ಅವರು ಮಾತನಾಡಿದರು   

   

–ಪಿಟಿಐ ಚಿತ್ರ

ಹೈದರಾಬಾದ್‌: ‘ನಿಮಗೆ ಹಿಂದೂ ಸನಾತನ ಧರ್ಮದ ಬಗ್ಗೆ ಒಲವಿದ್ದು, ಹಿಂದೂ ಧರ್ಮ ಸ್ವೀಕರಿಸಲು ಬಯಸಿದ್ದರೆ, ನಿಮ್ಮ ಮೇಲೆ ಪವಿತ್ರಜಲ ಸಿಂಪಡಿಸಿ ನಿಮಗೆ ಹಿಂದೂ ಧರ್ಮ ಸೇರಲು ತಿರುಪತಿ ತಿರುಮಲ ದೇವಸ್ಥಾನಮ್‌ (ಟಿಟಿಡಿ ) ಸಹಕರಿಸುತ್ತದೆ’ ಎಂದು ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಸೋಮವಾರ ಹೇಳಿದರು.

ADVERTISEMENT

ತಿರುಮಲದ ‘ಆಸ್ಥಾನ ಮಂಟಪಮ್‌’ನಲ್ಲಿ ನಡೆದ ಮೂರು ದಿನಗಳ ಹಿಂದೂ ಧಾರ್ಮಿಕ ಸಮಾವೇಶ ‘ಧಾರ್ಮಿಕ ಸದಸ್‌’ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಿಂದೂ ಧರ್ಮ ಪಾಲಿಸಲು ಇಚ್ಛಿಸುವ ಅನ್ಯಧರ್ಮೀಯರಿಗೆ ಹಿಂದೂ ಧರ್ಮದ ಪದ್ಧತಿಗಳು, ಸಂಪ್ರದಾಯ ಮತ್ತು ಆಚರಣೆಗಳ ಕುರಿತು ತರಬೇತಿ ನೀಡಲಾಗುವುದು. ಈ ಕಾರ್ಯವನ್ನು ವೆಂಕಟೇಶ್ವರ ಸ್ವಾಮಿ ಸನ್ನಿಧಾನದಲ್ಲಿ, ಪವಿತ್ರಜಲ ಸಿಂಪಡಸುವ ಮೂಲಕ ಆರಂಭಿಸಲಾಗುವುದು’ ಎಂದು ಅವರು ಹೇಳಿದರು.

‘ದೊಡ್ಡವರಿಂದ ಚಿಕ್ಕವರಿಗೂ ಅರ್ಥ ಆಗುವಂತೆ ಇತಿಹಾಸ ಮತ್ತು ಪುರಾಣಗಳನ್ನು ಪ್ರಚುರಪಡಿಸಬೇಕು. ಇದಕ್ಕಾಗಿ ನಾವು ಧರ್ಮ ಪ್ರಚಾರಕರಿಗೆ ತರಬೇತಿ ನೀಡಬೇಕು’ ಎಂದರು.

‘ಕೆಲ ಜಾತಿಗಳ ಕುರಿತು ಕೆಲವರು ತಾರತಮ್ಯ ಧೋರಣೆ ಹೊಂದಿರುತ್ತಾರೆ. ಇದು ಧಾರ್ಮಿಕ ಮತಾಂತರಕ್ಕೆ ಕಾರಣವಾಗಿದೆ. ಹೀಗಾಗಿ, ಗಿರಿಜನರು ಮತ್ತು ಹರಿಜನರು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚುಹೆಚ್ಚು ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮೀನುಗಾರ ಸಮುದಾಯಗಳು, ಬುಡಕಟ್ಟು ಸಮುದಾಯಗಳು, ಹರಿಜನರು ವಾಸಿಸುವ ಸ್ಥಳಗಳಲ್ಲಿ ದೇವಸ್ಥಾನಗಳ ನಿರ್ಮಾಣ ದೊಡ್ಡ ಮಟ್ಟದಲ್ಲಿ ನಡೆಯಬೇಕು’ ಎಂಬ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಗಿದೆ ಎಂದು ರೆಡ್ಡಿ ಹೇಳಿದರು.

‘ಶ್ರೀವಾಣಿ ಟ್ರಸ್ಟ್‌ ಸಹಯೋಗದೊಂದಿಗೆ ಟಿಟಿಡಿಯು ಈಗಾಗಲೇ ಹಿಂದುಳಿದ ವರ್ಗಗಳ ವಾಸಿಸುವ ಹಲವು ಪ್ರದೇಶಗಳಲ್ಲಿ ಸಾವಿರಾರು ದೇವಸ್ಥಾನಗಳನ್ನು ನಿರ್ಮಿಸಿದೆ. ಗೋಮಾತೆ‌ ರಕ್ಷಿಸಲು ಗೋ ಸಂರಕ್ಷಣಾ ಚಟುವಟಿಕೆಗಳನ್ನೂ ವ್ಯಾಪಕವಾಗಿ ಹಮ್ಮಿಕೊಂಡಿದೆ’ ಎಂದರು.

ನಿರ್ಣಯ: ತಮ್ಮ ಸುತ್ತಲಿನ ಪರಿಸರದ ಕಾರಣಕ್ಕಾಗಿ ಮತ್ತು ಸಂಪತ್ತಿನ ಪ್ರಲೋಭನೆಯಿಂದ ಮೇಲ್ವರ್ಗದ ಹಲವು ಯುವಕರು ಹಿಂದೂ ಧರ್ಮ ತೊರೆಯುತ್ತಿದ್ದಾರೆ. ಇಂಥ ಪರಿಸ್ಥಿತಿಗೆ ಅಂತ್ಯಹಾಡಲು ತರಬೇತಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಮತಾಂತರ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರ್ಣಯಗಳನ್ನು ಅಂಗೀಕರಿಸುವ ಮೂಲಕ ಸಮಾವೇಶ ಮುಕ್ತಾಯವಾಯಿತು.

ಸಮಾವೇಶದಲ್ಲಿ ಅಂಗೀಕಾರವಾದ ನಿರ್ಣಯಗಳನ್ನು ಕರುಣಾಕರ ರೆಡ್ಡಿ ಅವರು ಮಂಡಿಸಿದರು. ಸಮಾವೇಶದಲ್ಲಿ ಹಾಜರಿದ್ದ ದೇಶದ ವಿವಿಧ ಭಾಗಗಳ ಮಠಾಧೀಶರು ನೀಡಿದ್ದ ಸಲಹೆಗಳನ್ನೂ ನಿರ್ಣಯದಲ್ಲಿ ಸೇರಿಸಲಾಗಿದೆ. 

 ಸ್ವಇಚ್ಛೆಯಿಂದ ಹಿಂದೂ ಧರ್ಮವನ್ನು ಸೇರಲು ಬಯಸುವ ಅನ್ಯಧರ್ಮೀಯರನ್ನು ಸ್ವಾಗತಿಸಬೇಕು ಎಂಬ ವಿಚಾರವು ಈ ಸಮಾವೇಶದಲ್ಲಿ ಹೆಚ್ಚು ಚರ್ಚೆಗೆ ಒಳಗಾಯಿತು. ಜತೆಗೆ, ಹಿಂದೂ ಧರ್ಮವನ್ನು ಹೇಗೆ ಪ್ರಚುರಪಡಿಸಬೇಕು ಮತ್ತು ಹಿಂದೂಗಳ ಮತಾಂತರವನ್ನು ಹೇಗೆ ತಪ್ಪಿಸಬೇಕು ಎಂಬ ವಿಷಯಗಳು ಮಹತ್ವ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.