ನವದೆಹಲಿ: ‘ದಾನಿಗಳಿಂದ ತಮಗೆ ವರ್ಗಾವಣೆಯಾಗುತ್ತಿರುವ ರಕ್ತವು ಶುದ್ಧವಾಗಿದೆ ಎಂಬುದು ಸ್ವೀಕರಿಸುವವರಿಗೆ ಖಚಿತವಾಗಿ ತಿಳಿದಿರಬೇಕು’ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಲಿಂಗತ್ವ ಅಲ್ಪಸಂಖ್ಯಾತರು, ‘ಗೇ’ (ಪುರುಷ–ಪುರುಷನ ನಡುವಿನ ಲೈಂಗಿಕ ಸಂಬಂಧ ಹೊಂದಿರುವವರು) ಹಾಗೂ ಲೈಂಗಿಕ ಕಾರ್ಯಕರ್ತೆಯರನ್ನು ರಕ್ತದಾನದಿಂದ ಹೊರಗಿಟ್ಟಿರುವ ಮಾರ್ಗಸೂಚಿ 2017 ಅನ್ನು ಪ್ರಶ್ನಿಸಿ ಸಲ್ಲಿಸಲಾಗದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ತಾಕೀತು ಮಾಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು, ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡುತ್ತಿಲ್ಲ. ಇದೇ ವಿಷಯವನ್ನು ಪ್ರಸ್ತಾಪಿಸುವ ಮತ್ತೊಂದು ಬಾಕಿ ಉಳಿದಿರುವ ಅರ್ಜಿಯೊಂದಿಗೆ ಸೇರಿಸಲಾಗುವುದು ಎಂದು ಹೇಳಿದೆ.
ಬುಧವಾರದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಮಹಾರಾಷ್ಟ್ರ ಮೂಲದ ಅರ್ಜಿದಾರರ ಪರ ವಕೀಲರು, ಕೆಲವು ವರ್ಗದ ಜನರು ರಕ್ತದಾನ ಮಾಡುವುದನ್ನು ಹೊರತುಪಡಿಸಿದ ಮಾರ್ಗಸೂಚಿಗಳು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.
‘ದಾನಿಗಳಿಂದ ತಮಗೆ ವರ್ಗಾವಣೆಯಾಗುತ್ತಿರುವ ರಕ್ತವು ಶುದ್ಧವಾಗಿದೆ ಎಂಬುದು ಸ್ವೀಕರಿಸುವವರು ಖಚಿತಪಡಿಸಿಕೊಳ್ಳಬೇಕು’ ಎಂಬುದನ್ನು ನ್ಯಾಯಪೀಠವು ಗಮನಿಸಿತು.
‘ರಕ್ತದಾನ ಮಾಡುವ ವ್ಯಕ್ತಿಯು ಎಚ್ಐವಿ, ಹೆಪಟೈಟಿಸ್ ಬಿ ಅಥವಾ ಸಿ ಸೋಂಕನ್ನು ಹೊಂದಿರುವವರಾಗಿರಬಾರದು ಎಂಬುದು ರಕ್ತದಾನಿಗಳ ಮಾರ್ಗಸೂಚಿಯು ಉಲ್ಲೇಖಿಸುತ್ತದೆ’ ಎಂದೂ ನ್ಯಾಯಾಲಯವು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.