ADVERTISEMENT

ಮಾಲಿನ್ಯದಿಂದ ಐತಿಹಾಸಿಕ ಕೆಂಪು ಕೋಟೆಗೆ ಹೆಚ್ಚಿದ ಹಾನಿ: ಅಧ್ಯಯನ

ಪಿಟಿಐ
Published 15 ಸೆಪ್ಟೆಂಬರ್ 2025, 12:30 IST
Last Updated 15 ಸೆಪ್ಟೆಂಬರ್ 2025, 12:30 IST
   

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ತೀವ್ರಗೊಂಡಿರುವ ವಾಯು ಮಾಲಿನ್ಯವು ಐತಿಹಾಸಿಕ ಕೆಂಪುಕೋಟೆಗೆ ಕ್ರಮೇಣ ಹಾನಿಯನ್ನು ಹೆಚ್ಚಿಸುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ.

17ನೇ ಶತಮಾನದ ಸ್ಮಾರಕದ ಕೆಂಪು ಮರಳು ಶಿಲೆಯ ಗೋಡೆಗಳ ಮೇಲೆ ಮಾಲಿನ್ಯದ ಕಪ್ಪು ಪದರಗಳು ಏರ್ಪಡುತ್ತಿದ್ದು, ಅದರ ರಚನೆ ಮತ್ತು ಆಕರ್ಷಣೆಗೆ ಧಕ್ಕೆ ತರುತ್ತಿದೆ ಎಂದು ಭಾರತ–ಇಟಲಿಯ ಅಧ್ಯಯನ ಹೇಳಿದೆ.

1639 ಮತ್ತು 1648ರ ನಡುವೆ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ಐತಿಹಾಸಿಕ ಸ್ಮಾರಕದ ಮೇಲೆ ನಗರ ವಾಯು ಮಾಲಿನ್ಯವು ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಮೊದಲ ಸಮಗ್ರ ವೈಜ್ಞಾನಿಕ ಅಧ್ಯಯನ ಇದಾಗಿದೆ.

ADVERTISEMENT

ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಇಟಲಿಯ ವಿದೇಶಾಂಗ ಸಚಿವಾಲಯದ ನಡುವಿನ ಸಹಯೋಗದಲ್ಲಿ ಐಐಟಿ ರೂರ್ಕಿ, ಐಐಟಿ ಕಾನ್ಪುರ, ವೆನಿಸ್‌ನ ಕ್ಯಾ ಫೋಸ್ಕರಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಪುರಾತತ್ವ ಇಲಖೆಯ(ಎಎಸ್‌ಐ) ವಿಜ್ಞಾನಿಗಳ ತಂಡ ನಡೆಸಿದೆ.

ಜಾಫರ್ ಮಹಲ್ ಸೇರಿದಂತೆ ಕೆಂಪು ಕೋಟೆ ಸಂಕೀರ್ಣದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಲಾದ ಮರಳು ಶಿಲೆ ಮತ್ತು ಕಪ್ಪು ಹೊರಪದರದ ಮಾದರಿಗಳನ್ನು ತಂಡ ವಿಶ್ಲೇಷಿಸಿದೆ.

ಕೆಂಪುಕೋಟೆಯ ಆಶ್ರಯ ಪ್ರದೇಶಗಳಲ್ಲಿ ಕಪ್ಪು ಹೊರಪದರಗಳು ಸುಮಾರು 0.05 ಮಿಲಿಮೀಟರ್‌ಗಳಷ್ಟು ತೆಳುವಾಗಿದ್ದರೆ, ಹೆಚ್ಚಿನ ಟ್ರಾಫಿಕ್ ದಟ್ಟಣೆಯ ಕಡೆಯಲ್ಲಿರುವ ಗೋಡೆಗಳ ಮೇಲೆ 0.5 ಮಿಲಿಮೀಟರ್‌ಗಳಷ್ಟಿವೆ ಎಂದು ಸಂಶೋಧನೆ ತಿಳಿಸಿದೆ.

ಈ ದಪ್ಪ ಪದರಗಳು ಕಲ್ಲಿನ ಮೇಲ್ಮೈಗೆ ಬಲವಾಗಿ ಅಂಟಿಕೊಂಡಿದ್ದು, ಶಿಲೆಯ ಮೇಲ್ಮೈ ಬೀಳುವ ಮತ್ತು ಸಂಕೀರ್ಣವಾದ ಕೆತ್ತನೆಗಳ ನಷ್ಟದ ಅಪಾಯವನ್ನುಂಟುಮಾಡುತ್ತಿವೆ ಎಂದು ಅದು ಹೇಳಿದೆ.

ಸಂಶೋಧಕರ ಪ್ರಕಾರ, ಕಪ್ಪು ಹೊರಪದರಗಳು ಜಿಪ್ಸಮ್, ಬಾಸನೈಟ್, ವೆಡ್ಡೆಲೈಟ್ ಮತ್ತು ಸೀಸ, ಸತು, ಕ್ರೋಮಿಯಂ, ತಾಮ್ರದಂತಹ ಭಾರ ಲೋಹಗಳನ್ನು ಒಳಗೊಂಡಿರುತ್ತವೆ. ಈ ಮಾಲಿನ್ಯಕಾರಕಗಳು ವಾಹನಗಳು ಹೊರಸೂಸುವ ಹೊಗೆ, ಸಿಮೆಂಟ್ ಕಾರ್ಖಾನೆಗಳು ಮತ್ತು ನಗರದಲ್ಲಿನ ನಿರ್ಮಾಣ ಚಟುವಟಿಕೆಗಳಿಂದ ರೂಪುಗೊಳ್ಳುತ್ತಿವೆ ಎಂದು ಅದು ಹೇಳಿದೆ.

ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳಂತಹ ಮಾಲಿನ್ಯಕಾರಕಗಳ ನಡುವಿನ ರಾಸಾಯನಿಕ ಕ್ರಿಯೆಗಳು ಜಿಪ್ಸಮ್ ಪದರಗಳ ರಚನೆಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಅಧ್ಯಯನವು ಎತ್ತಿ ತೋರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.