ADVERTISEMENT

ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ‘ಸುಪ್ರೀಂ‘ ನಿರ್ಧಾರ ಸ್ವಾಗತಿಸಿದ ಸ್ಟಾಲಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2022, 5:19 IST
Last Updated 12 ನವೆಂಬರ್ 2022, 5:19 IST
   

ಚೆನ್ನೈ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರನ್ನು ಅವಧಿಗೂ ಮುನ್ನ ಬಿಡುಗಡೆ ಮಾಡುವ ‌ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಸ್ವಾಗತಿಸಿದ್ದಾರೆ.

‘ಆರು ಜನ ಅಪರಾಧಿಗಳನ್ನು ಬಿಡುಗಡೆ ಮಾಡುವ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ‘ ಎಂದು ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ. ಅಲ್ಲದೇ ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಅವರು ಬಣ್ಣಿಸಿದ್ದಾರೆ.

‘ವಿರೋಧ ಪಕ್ಷದಲ್ಲಿ ಇದ್ದಾಗಲೂ, ಅಧಿಕಾರದಲ್ಲಿ ಇದ್ದಾಗಲೂ ಡಿಎಂಕೆ ಸರ್ಕಾರ ಇವರ ಬಿಡುಗಡೆಗೆ ಧ್ವನಿ ಎತ್ತಿದೆ‘ ಎಂದು ಅವರು ಹೇಳಿದ್ದಾರೆ.

ADVERTISEMENT

‘ಸರ್ಕಾರ ಹಾಗೂ ಜನರ ನಿರ್ಧಾರವನ್ನು ನೇಮಕಗೊಂಡ ಗವರ್ನರ್‌ ನಿರುಪ‍ಯುಕ್ತಗೊಳಿಸುವಂತಿಲ್ಲ ಎನ್ನುವುದಕ್ಕೆ ಈ ತೀರ್ಪು ಉದಾಹರಣೆ‘ ಎಂದು ಸ್ಟಾಲಿನ್ ಹೇಳಿದ್ದಾರೆ.

ರಾಜೀವ್‌ ಗಾಂಧಿ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ ನಳಿನಿ ಶ್ರೀಹರನ್‌ ಸೇರಿದಂತೆ ಒಟ್ಟು ಆರು ಮಂದಿಯನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿ ತೀರ್ಪು ನೀಡಿದೆ.

1991ರ ಮೇ 21 ರಂದು ತಮಿಳು‌ನಾಡಿನ ಶ್ರೀಪೆರಂಬದೂರಿನಲ್ಲಿ ರಾಜೀವ್‌ ಗಾಂಧಿಯವರ ಹತ್ಯೆಯಾಗಿತ್ತು. ಎಲ್‌ಟಿಟಿಇ ಉಗ್ರ ಸಂಘಟನೆಗೆ ಸೇರಿದ್ದ ಮಹಿಳಾ ಆತ್ಮಾಹುತಿ ಬಾಂಬರ್ ರಾಜೀವ್ ಗಾಂಧಿಯನ್ನು ಕೊಲೆ ಮಾಡಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.