ADVERTISEMENT

'ಅಬ್ದುಲ್ ಕಲಾಂ ಪ್ರಶಸ್ತಿ'ಗೆ ಮರು ನಾಮಕರಣ: ಟೀಕೆ ಬಳಿಕ ಎಚ್ಚೆತ್ತ ಜಗನ್ ಸರ್ಕಾರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 11:30 IST
Last Updated 5 ನವೆಂಬರ್ 2019, 11:30 IST
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ   

ಅಮರಾವತಿ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿಯನ್ನು 'ವೈಎಸ್‌ಆರ್ ವಿದ್ಯಾ ಪುರಸ್ಕಾರ' ಎಂದು ನಾಮಕರಣ ಮಾಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೇರಿದಂತೆ ಹಲವರು ಹೆಸರು ಬದಲಾವಣೆ ಕುರಿತಂತೆ ವಿರೋಧ ಮತ್ತು ಟೀಕೆ ವ್ಯಕ್ತಪಡಿಸಿದಬೆನ್ನಲ್ಲೇ ಹೆಸರು ಬದಲಾವಣೆಯ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಮೌಲಾನ ಅಬ್ದುಲ್ ಕಲಾಂ ಆಜಾದ್‌ರ ಜನ್ಮ ದಿನಾಚರಣೆ ಅಂಗವಾಗಿ ನವೆಂಬರ್ 11ರ ರಾಷ್ಟ್ರೀಯ ಶೈಕ್ಷಣಿಕ ದಿನದಂದು ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 'ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ' ಎಂಬ ಹೆಸರಿಗೆ ಬದಲಾಗಿ 'ವೈಎಸ್‌ಆರ್ ವಿದ್ಯಾ ಪುರಸ್ಕಾರ' ಎಂದು ಬದಲಾಯಿಸಿ ಸೋಮವಾರ ಸರ್ಕಾರ ಆದೇಶ ಹೊರಡಿಸಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

ಆದರೆ ಮಂಗಳವಾರ ಮುಂಜಾನೆ ಹೆಸರು ಬದಲಾವಣೆ ಮಾಡಿರುವ ನಿರ್ಧಾರವನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರದ್ದುಗೊಳಿಸಿದ್ದು, ಪ್ರಶಸ್ತಿಗಳನ್ನು ಡಾ. ಅಬ್ದುಲ್ ಕಲಾಂ, ಮಹಾತ್ಮ ಗಾಂಧಿ ಮತ್ತು ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿಯೇ ನೀಡುವಂತೆ ಸೂಚಿಸಿದ್ದಾರೆ.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವೈಎಸ್‌ಆರ್ ಅಥವಾ ರಾಜಶೇಖರ ರೆಡ್ಡಿ ಅವರು ಜಗನ್ ಮೋಹನ್ ರೆಡ್ಡಿಯವರ ತಂದೆ. ದಕ್ಷಿಣದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದರು. 2009ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು.

ಇನ್ನು ಹೆಸರು ಬದಲಾವಣೆ ವಿಚಾರವಾಗಿ ಟ್ವೀಟ್ ಮೂಲಕ ಕಿಡಿಕಾರಿರುವ ಚಂದ್ರಬಾಬು ನಾಯ್ಡು, ತನ್ನ ಅತ್ಯುತ್ತಮ ಕೆಲಸ ಮತ್ತು ಸ್ಫೂರ್ತಿದಾಯಕ ಜೀವನದಿಂದಾಗಿ ಕಲಾಂ ಅವರು ದೇಶಕ್ಕಾಗಿ ಕೊಡುಗೆ ನೀಡಿದ್ದಾರೆ. ಆದರೆ ಜಗನ್ ಸರ್ಕಾರವು 'ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ' ಎಂಬುದನ್ನು 'ವೈಎಸ್‌ಆರ್ ವಿದ್ಯಾ ಪುರಸ್ಕಾರ' ಎಂದು ಬದಲಾಯಿಸುವ ಮೂಲಕ ಹಿರಿಯ ನಾಯಕನಿಗೆ ಅಗೌರವತೋರಿದ್ದಾರೆ ಎಂದುಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.