ADVERTISEMENT

ಭಾರತದಲ್ಲಿ ಅಧಿಕ ಜನರಿಗೆ ಕೋವಿಡ್‌ ಲಸಿಕೆ; ಆತಂಕ ಬೇಡ: ಪೂನಾವಾಲಾ

ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳು

ಪಿಟಿಐ
Published 21 ಡಿಸೆಂಬರ್ 2022, 10:21 IST
Last Updated 21 ಡಿಸೆಂಬರ್ 2022, 10:21 IST
ಅದಾರ್‌ ಪೂನಾವಾಲಾ
ಅದಾರ್‌ ಪೂನಾವಾಲಾ   

ಪುಣೆ: ‘ಚೀನಾದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ಆದರೆ, ಅತ್ಯಧಿಕ ಜನರಿಗೆ ಭಾರತದಲ್ಲಿ ಕೋವಿಡ್‌ ಲಸಿಕೆ ಹಾಕಿರುವ ಕಾರಣ ಆತಂಕಪಡುವ ಅಗತ್ಯ ಇಲ್ಲ’ ಎಂದು ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ (ಎಸ್‌ಐಐ) ಸಿಇಒ ಅದಾರ್‌ ಪೂನಾವಾಲಾ ಹೇಳಿದ್ದಾರೆ.

ಚೀನಾ, ಅಮೆರಿಕದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೊರೊನಾ ಸೋಂಕು ದೃಢಪಟ್ಟ ಮಾದರಿಗಳನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ (ಜಿನೋಮ್‌ ಸೀಕ್ವೆನ್ಸಿಂಗ್‌) ಒತ್ತು ನೀಡುವಂತೆ ಕೇಂದ್ರ ಆರೋಗ್ಯ ಸಚಿವರು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ, ಪೂನಾವಾಲಾ ಅವರು ಈ ಟ್ವೀಟ್‌ ಮಾಡಿದ್ದಾರೆ.

‘ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಕೋವಿಡ್‌ ಪ್ರಸರಣ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಕಾರ್ಯಪಡೆ ಅಥವಾ ಸಮಿತಿ ರಚನೆ: ಫಡಣವೀಸ್

ನಾಗ್ಪುರ: ‘ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳ ಕುರಿತು ಅಧ್ಯಯನಕ್ಕಾಗಿ ಕಾರ್ಯಪಡೆ ಇಲ್ಲವೇ ಸಮಿತಿಯೊಂದನ್ನು ರಚಿಸಲಾಗುತ್ತದೆ’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ವಿಧಾನಸಭೆಯಲ್ಲಿ ಬುಧವಾರ ಹೇಳಿದ್ದಾರೆ.

ಚೀನಾ, ಜಪಾನ್‌ದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ವಿರೋಧ ಪಕ್ಷ ನಾಯಕ ಅಜಿತ್‌ ಪವಾರ್‌ ಅವರ ಪ್ರಸ್ತಾಪಿಸಿದಾಗ, ಫಡಣವೀಸ್‌ ಅವರು ಈ ವಿಷಯ ಪ್ರಕಟಿಸಿದರು.

‘ಚೀನಾದಲ್ಲಿ ಕೊರೊನಾ ವೈರಸ್‌ನ ಹೊಸ ತಳಿಗಳ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಕುರಿತು ಅಧ್ಯಯನಕ್ಕೆ ಏನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪವಾರ್‌ ಪ್ರಶ್ನಿಸಿದರು.

‘ಪರಿಸ್ಥಿತಿ ಮೇಲೆ ನಿಗಾ ಇಡಲಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗುತ್ತದೆ’ ಎಂದು ಫಡಣವೀಸ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.