ನವದೆಹಲಿ: ಪೊಲೀಸರು ತಮ್ಮ ಕರ್ತವ್ಯದಲ್ಲಿ ಕಠಿಣ ಅಥವಾ ನಿಷ್ಠೂರವಾಗಿ ವರ್ತಿಸುವುದು ಸರಿಯಾಗಿಯೇ ಇದೆ. ಏಕೆಂದರೆ ಆ ಬಿಗಿ ನಿಲುವಿನ ಉದ್ದೇಶ ದೊಡ್ಡ ಪ್ರಮಾಣದಲ್ಲಿ ಒಳ್ಳೆಯದನ್ನುಂಟು ಮಾಡುವುದೇ ಆಗಿದೆ ಎಂದು ಬೌದ್ಧ ಗುರು ದಲೈ ಲಾಮಾ ಅಭಿಪ್ರಾಯಪಟ್ಟರು.
ಭಾರತೀಯ ಪೊಲೀಸ್ ಪ್ರತಿಷ್ಠಾನದ ಆಹ್ವಾನದ ಮೇರೆಗೆ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ‘ಪೊಲೀಸ್ ಕರ್ತವ್ಯದಲ್ಲಿ ಸಹಾನುಭೂತಿ ಮತ್ತು ಅನುಭೂತಿ‘ ಕುರಿತು ಅವರು ಉಪನ್ಯಾಸ ನೀಡಿದರು.
ಧರ್ಮಶಾಲಾದ ತಮ್ಮ ನಿವಾಸದಿಂದ ಆನ್ಲೈನ್ ಮೂಲಕ ಉಪನ್ಯಾಸ ನೀಡಿದ ಅವರು, ‘ಬಿಗಿತನ ಎಂಬುದನ್ನು ಸರಳವಾಗಿ ಹೇಳುವುದಾದರೆ ಅದೊಂದು ಶಿಸ್ತಿನ ವಿಧಾನ. ಅದು ಹಿಂಸಾತ್ಮಕವಾಗಿರುತ್ತದೋ ಇಲ್ಲವೋ ಎನ್ನುವುದು ಆ ನಡವಳಿಕೆಯ ಉದ್ದೇಶದ ಮೇಲೆ ಅವಲಂಬಿತವಾಗಿರುತ್ತದೆ. ಪೊಲೀಸರಾಗಿ ಕೆಲವೊಂದು ಸಂದರ್ಭಗಳಲ್ಲಿ ಕಠಿಣ ವಿಧಾನಗಳನ್ನು ಅನುರಿಸಬೇಕಾಗುತ್ತದೆ. ಆದರೆ ಅದರ ಹಿಂದೆ ಜನರನ್ನು ರಕ್ಷಿಸುವ ಉದ್ದೇಶ ಇರುತ್ತದೆ‘ ಎಂದು ಅವರು ಹೇಳಿದರು.
‘ಬ್ರಿಟಿಷರು ಆಧುನಿಕ ಶಿಕ್ಷಣವನ್ನು ಪರಿಚಯಿಸಿದರು. ಆದರೆ, ನಮ್ಮ ದೇಶದಲ್ಲಿರುವ ಅಹಿಂಸೆ, ಸಹಾನುಭೂತಿ ಮತ್ತು ಅನುಭೂತಿಯಂತಹ ಸಾವಿರಾರು ವರ್ಷಗಳಷ್ಟು ಪುರಾತನ ಆಚರಣೆಗಳನ್ನು ಸಂರಕ್ಷಿಸಲು ಪ್ರಯತ್ನಿಸಬೇಕು‘ ಎಂದರು.
ಮಾನವರು ಸಹಾನುಭೂತಿ ಮತ್ತು ಅನುಭೂತಿ ಹೊಂದಿರಬೇಕಾದ ಅಗತ್ಯವನ್ನು ಒತ್ತಿಹೇಳಿದ ಅವರು, ಇಂಥ ಬೋಧನೆಗಳು ಶಿಕ್ಷಣದ ಭಾಗವಾಗಿರಬೇಕು ಎಂದು ತಿಳಿಸಿದರು.
‘ವಿದ್ಯಾರ್ಥಿಗಳಿಗೆಜಾತ್ಯತೀತ ವಿಧಾನದಲ್ಲಿ ಶಿಕ್ಷಣ ನೀಡಬೇಕು. ಇಂಥ ಶಿಕ್ಷಣದಿಂದಾಗಿ ಜನರಲ್ಲಿ ತನ್ನಿಂತಾನೇ ಸಹಾನುಭೂತಿ ಬೆಳೆಯುತ್ತದೆ‘ ಎಂದು ಹೇಳಿದ ದಲೈ ಲಾಮಾ, ಭಾರತೀಯ ಪೊಲೀಸರು ‘ಕರುಣೆ ಮತ್ತು ಅಹಿಂಸೆ‘ಯ ರಕ್ಷಕರು ಎಂದು ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.