ಪಟ್ನಾ: ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ತಮ್ಮ ನಾಯಕ ತೇಜಸ್ವಿ ಯಾದವ್ ಹಾಜರಾಗುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷವು ಸೋಮವಾರ ಪ್ರಕಟಿಸಿದೆ. ಜೊತೆಗೆ ಸಮಾರಂಭವನ್ನು ಬಹಿಷ್ಕರಿಸಲಾಗಿದೆ ಎಂದೂ ತಿಳಿಸಿದೆ.
‘ಪ್ರಮಾಣವಚನ ಸಮಾರಂಭವನ್ನು ಆರ್ಜೆಡಿ ಬಹಿಷ್ಕರಿಸುತ್ತದೆ. ಬದಲಾವಣೆಗಾಗಿನ ಜನಾದೇಶವು ಎನ್ಡಿಎ ವಿರುದ್ಧ ಇದೆ. ಆದರೆ, ಜನಾದೇಶವನ್ನು ಬದಲಿಸಲಾಗಿದೆ. ನಿರುದ್ಯೋಗಿಗಳು, ರೈತರು, ಗುತ್ತಿಗೆ ಕೆಲಸಗಾರರು ಮತ್ತು ಶಿಕ್ಷಕರನ್ನು ಕೇಳಿ. ಸರ್ಕಾರದ ವಂಚನೆಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ನಾವು ಜನರ ಪ್ರತಿನಿಧಿಗಳಾಗಿದ್ದೇವೆ ಮತ್ತು ಸಾರ್ವಜನಿಕರೊಂದಿಗೆ ನಿಲ್ಲುತ್ತೇವೆ’ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಅಂದಹಾಗೆ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಸತತ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದೆ.ಭಾನುವಾರ ನಡೆದ ಸಭೆ ವೇಳೆ ಎನ್ಡಿಯ ಮೈತ್ರಿಕೂಟದ ಪಕ್ಷಗಳು ನಿತೀಶ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದವು.
243 ಸದಸ್ಯ ಬಲದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 125 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಬಿಜೆಪಿ 74 ಮತ್ತು ನಿತೀಶ್ ಕುಮಾರ್ ಅವರ ಜೆಡಿಯು 43 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. 75 ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ಆರ್ಜೆಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಪಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.