ಶಿಮ್ಲಾ: ರೊಹ್ತಾಂಗ್ ಸುರಂಗಕ್ಕೆ ದಶಕದ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಡಿಗಲ್ಲು ಹಾಕುವ ವೇಳೆ ಹಾಕಿದ್ದ ಶಿಲಾಫಲಕವನ್ನು,ಅ.3ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೂ ಮುನ್ನ ತೆಗೆದುಹಾಕಲಾಗಿದೆ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಕುಲ್ದೀಪ್ ಸಿಂಗ್ ಠಾಕೂರ್, ‘2010 ಜೂ.28ರಂದು ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಲ್ ಹಾಗೂ ಕೇಂದ್ರ ಸಚಿವ ವೀರ್ಭದ್ರ ಸಿಂಗ್ ಅವರ ಸಮ್ಮುಖದಲ್ಲಿ ಸೋನಿಯಾ ಗಾಂಧಿ ಅವರು ಯೋಜನೆಗೆ ಅಡಿಗಲ್ಲು ಹಾಕಿದ್ದರು. ಈ ಶಿಲಾಫಲಕವನ್ನು 15 ದಿನದೊಳಗಾಗಿ ಸರ್ಕಾರ ಅಲ್ಲಿಯೇ ಅಳವಡಿಸದೇ ಇದ್ದಲ್ಲಿ ರಾಜ್ಯವ್ಯಾಪಿ ಮುಷ್ಕರ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಈ ಕುರಿತುಲಾಹೊಲ್–ಸ್ಪೀತಿ ಕಾಂಗ್ರೆಸ್ ಘಟಕವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನ ಕುರಿತು ಇಲ್ಲಿಯವರೆಗೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಈ ಸುರಂಗ ಮಾರ್ಗಕ್ಕೆ ‘ಅಟಲ್’ ಎಂದು ಹೆಸರಿಡಲಾಗಿದೆ. 2000ನೇ ಇಸವಿಯಲ್ಲಿ ಈ ಸುರಂಗ ಮಾರ್ಗದ ನಿರ್ಮಾಣದ ಕುರಿತು ಲಾಹೊಲ್–ಸ್ಪೀತಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ವಾಜಪೇಯಿ ಘೋಷಿಸಿದ್ದರು. ಸುರಂಗಕ್ಕೆ ಸಂಪರ್ಕಿಸುವ ಮಾರ್ಗ ನಿರ್ಮಾಣಕ್ಕೆ 2002ರಲ್ಲಿ ವಾಜಪೇಯಿ ಅವರು ಅಡಿಗಲ್ಲು ಹಾಕಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.