ಬಂಧನ
(ಪ್ರಾತಿನಿಧಿಕ ಚಿತ್ರ)
ಮುಂಬೈ: ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಡ್ರೈ ಕ್ಲೀನಿಂಗ್ ಅಂಗಡಿಯೊಂದರಲ್ಲಿ ಬ್ಯಾಂಕ್ಗೆ ಸೇರಿದ ₹5 ಕೋಟಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಎಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕೆಲವು ವ್ಯಕ್ತಿಗಳು ಎಕ್ಸಿಸ್ ಬ್ಯಾಂಕ್ನ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ನೀವು ನಮಗೆ ₹5 ಕೋಟಿ ನಗದು ನೀಡಿದರೆ, ₹6 ಕೋಟಿ ವಾಪಸ್ ನೀಡುವುದಾಗಿ ಆಮಿಷವೊಡ್ಡಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ನೂರುಲ್ ಹಸನ್ ‘ಪಿಟಿಐ’ಗೆ ತಿಳಿಸಿದ್ದಾರೆ.
‘ಖಚಿತ ಮಾಹಿತಿ ಆಧರಿಸಿ ಅಪರಾಧ ವಿಭಾಗ ಮತ್ತು ಭಯೋತ್ಪಾದನಾ ನಿಗ್ರಹ ದಳದ ತಂಡಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಇಂದು ಬೆಳಿಗ್ಗೆ ತುಮ್ಸಾರ್ ಪ್ರದೇಶದ ಇಂದಿರಾ ನಗರದಲ್ಲಿರುವ ಡ್ರೈ ಕ್ಲೀನಿಂಗ್ ಅಂಗಡಿಯ ಮೇಲೆ ದಾಳಿ ನಡೆಸಿದ್ದು, ಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ₹5 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ’ ಎಂದು ನೂರುಲ್ ಹಸನ್ ಮಾಹಿತಿ ನೀಡಿದ್ದಾರೆ.
ಹಣ ವಶಪಡಿಸಿಕೊಂಡಿರುವ ಬಗ್ಗೆ ಎಕ್ಸಿಸ್ ಬ್ಯಾಂಕ್ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಜತೆಗೆ, ಬ್ಯಾಂಕ್ ಮ್ಯಾನೇಜರ್ ಸೇರಿ ಇತರ ಎಂಟು ಮಂದಿಯನ್ನು ಬಂಧಿಸಿ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.