ADVERTISEMENT

ಧರ್ಮ ಆಧಾರಿತ ಜನಸಂಖ್ಯಾ ಅಸಮತೋಲನ ಕಡೆಗಣಿಸುವ ವಿಚಾರವಲ್ಲ: ಮೋಹನ್‌ ಭಾಗವತ್‌

ಪಿಟಿಐ
Published 5 ಅಕ್ಟೋಬರ್ 2022, 8:33 IST
Last Updated 5 ಅಕ್ಟೋಬರ್ 2022, 8:33 IST
ನಾಗ್ಪುರ: ವಿಜಯದಶಮಿ ಕಾರ್ಯಕ್ರಮದಲ್ಲಿ ಪರ್ವತಾರೋಹಿ ಸಂತೋಷ್‌ ಯಾದವ್‌ ಅವರನ್ನು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿನಂದಿಸಿದರು. ಸಂತೋಷ್‌ ಅವರು ಎರಡು ಬಾರಿ ಮೌಂಟ್‌ ಎವರೆಸ್ಟ್‌ ಏರಿದ ವಿಶ್ವದ ಮೊದಲ ಮಹಿಳೆ.
ನಾಗ್ಪುರ: ವಿಜಯದಶಮಿ ಕಾರ್ಯಕ್ರಮದಲ್ಲಿ ಪರ್ವತಾರೋಹಿ ಸಂತೋಷ್‌ ಯಾದವ್‌ ಅವರನ್ನು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿನಂದಿಸಿದರು. ಸಂತೋಷ್‌ ಅವರು ಎರಡು ಬಾರಿ ಮೌಂಟ್‌ ಎವರೆಸ್ಟ್‌ ಏರಿದ ವಿಶ್ವದ ಮೊದಲ ಮಹಿಳೆ.   

ನಾಗ್ಪುರ: ರಾಷ್ಟ್ರದಲ್ಲಿ ಸಮುದಾಯ ಆಧಾರಿತ ಜನಸಂಖ್ಯಾ ಅಸಮತೋಲನವು ಪ್ರಮುಖ ವಿಚಾರವಾಗಿದ್ದು, ಕಡೆಗಣಿಸುವಂತಿಲ್ಲ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ.

ನಾಗ್ಪುರದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ವಿಸ್ತೃತ ಚರ್ಚೆಯೊಂದಿಗೆ ಜನಸಂಖ್ಯಾ ನೀತಿಯನ್ನು ರಾಷ್ಟ್ರದಲ್ಲಿ ಜಾರಿಗೊಳಿಸಬೇಕು. ಈ ನೀತಿಯು ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅನ್ವಯಗೊಳ್ಳಬೇಕು ಎಂದು ಹೇಳಿದ್ದಾರೆ.

ರಾಷ್ಟ್ರದಲ್ಲಿ ಸಮುದಾಯ ಆಧಾರಿತ ಜನಸಂಖ್ಯಾ ಅಸಮತೋಲನವು ಪ್ರಮುಖ ವಿಚಾರವಾಗಿದೆ. ಇದನ್ನು ಕಡೆಗಣಿಸುವಂತಿಲ್ಲ. ಜನಸಂಖ್ಯೆ ಅಸಮತೋಲನವು ಭೌಗೋಳಿಕ ಗಡಿಗಳ ಬದಲಾವಣೆಗೆ ದಾರಿಯಾಗುತ್ತವೆ ಎಂದು ಭಾಗವತ್‌ ತಿಳಿಸಿದ್ದಾರೆ.

ADVERTISEMENT

ಸಮತೋಲನವನ್ನು ಕಾಯ್ದುಕೊಳ್ಳಲು ನೂತನ ಜನಸಂಖ್ಯಾ ನೀತಿ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅನ್ವಯಗೊಳ್ಳಬೇಕು. ರಾಷ್ಟ್ರದಲ್ಲಿ ಸಮುದಾಯಗಳ ನಡುವೆ ಜನಸಂಖ್ಯೆಯ ಸಮತೋಲನ ಇರಬೇಕು ಎಂದಿದ್ದಾರೆ.

ಚೀನಾದ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ಕಾನೂನಿನ ಬಗ್ಗೆಯೂ ಮಾತನಾಡಿದ ಭಾಗವತ್‌, ನಾವು ಜನಸಂಖ್ಯೆಯನ್ನು ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಚೀನಾದಲ್ಲಿ ಏನೇನಾಗಿದೆ ಎಂಬುದನ್ನೂ ನಾವು ಗಮನಿಸಬೇಕು. ಚೀನಾ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ಕಾನೂನಿನ ಮೊರೆ ಹೋಯಿತು. ಆದರೆ ಅದಕ್ಕೀಗ ವಯಸ್ಸಾಗುತ್ತಿದೆ ಎಂದಿದ್ದಾರೆ.

ಭಾರತದಲ್ಲಿ 57 ಕೋಟಿ ಯುವಕರಿದ್ದಾರೆ. ಮುಂದಿನ 30 ವರ್ಷಗಳವರೆಗೆ ಭಾರತ ಯುವ ರಾಷ್ಟ್ರವಾಗಿ ಉಳಿಯಲಿದೆ. ಆದರೆ 50 ವರ್ಷಗಳ ನಂತರದ ಪರಿಸ್ಥಿತಿ ಏನು? ಆಗ ಅಷ್ಟು ಜನಸಂಖ್ಯೆಯ ಹಸಿವು ನೀಗಿಸುವಷ್ಟು ಆಹಾರ ಸಂಪನ್ಮೂಲಗಳಿವೆಯೇ? ಎಂದು ಭಾಗವತ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸರ್ಕಾರಿ ಕೆಲಸಗಳನ್ನೇ ನೆಚ್ಚಿ ಕುಳಿತುಕೊಳ್ಳುವುದರ ಬದಲು ಜನರು ಸ್ವಂತ ಉದ್ಯಮಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಲ್ಲ ಸರ್ಕಾರಿ ಕೆಲಸಗಳನ್ನು ಜೊತೆಗೂಡಿಸಿದರೆ ಕೇವಲ ಶೇಕಡಾ 30ರಷ್ಟು ಜನಸಂಖ್ಯೆಗೆ ಉದ್ಯೋಗ ನೀಡಬಹುದು. ಉಳಿದವರು ತಮ್ಮದೇ ಉದ್ಯಮಗಳನ್ನು ಆರಂಭಿಸಬೇಕು. ಆ ಮೂಲಕ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಭಾಗವತ್‌ ಕರೆ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಪರ್ವತಾರೋಹಿ ಸಂತೋಷ್‌ ಯಾದವ್‌ ಅವರನ್ನು ಮುಖ್ಯ ಅತಿಥಿಯಾಗಿ ಆರೆಸ್ಸೆಸ್‌ ಆಹ್ವಾನಿಸಿತ್ತು. ಇವರು ಮೌಂಟ್‌ ಎವರೆಸ್ಟ್‌ ಅನ್ನು ಎರಡು ಬಾರಿ ಏರಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಸಮಾಜದಲ್ಲಿ ಹೆಚ್ಚು ಸಮಾನತೆ ಮೂಡಿಸಲು ಎಲ್ಲಾ ಜಾತಿಯ ಹಾಗೂ ಆರ್ಥಿಕ ವರ್ಗದ ಮಂದಿಯೊಂದಿಗೆ ಸ್ನೇಹ ಬೆಳೆಸಲು ನಾವು ಪ್ರಯತ್ನಿಸಬೇಕು.

- ಮೋಹನ್‌ ಭಾಗವತ್‌, ಆರೆಸ್ಸೆಸ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.