ಮುಂಬೈ: ಉತ್ಪಾದನೆಯ ವಿಕೇಂದ್ರೀಕರಣದಿಂದ ದೇಶದ ಆರ್ಥಿಕತೆಗೆ ಪ್ರಯೋಜನವಾಗಲಿದೆ. ಉದ್ಯೋಗ ಮತ್ತು ಸ್ವ ಉದ್ಯೋಗಾವಕಾಶ ಸೃಷ್ಟಿಗೆ ನೆರವಾಗಲಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬೈ ಶಾಲೆಯೊಂದರಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನೈಸರ್ಗಿಕ ಸಂಪನ್ಮೂಲಗಳ ಮಿತವಾದ ಬಳಕೆಯನ್ನು ಖಾತರಿಪಡಿಸಲು ‘ನಿಯಂತ್ರಿತ ಗ್ರಾಹಕತ್ವ’ದ ಅಗತ್ಯವಿದೆ ಎಂದಿದ್ದಾರೆ.
ನಾವು ಎಷ್ಟು ಸಂಪಾದಿಸುತ್ತೇವೆ ಎಂಬುದರ ಆಧಾರದಲ್ಲಿ ಜೀವನ ಗುಣಮಟ್ಟವನ್ನು ನಿರ್ಧರಿಸಬಾರದು. ನಾವು ಎಷ್ಟು ಮರಳಿ ನೀಡುತ್ತೇವೆ ಎಂಬುದರ ಆಧಾರದಲ್ಲಿ ನಿರ್ಧರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಎಲ್ಲರ ಹಿತವನ್ನು ಪರಿಗಣಿಸಿದಾಗ ನಮಗೆ ಸಂತೋಷವಾಗುತ್ತದೆ. ಸಂತಸವಾಗಿರಲು ನಾವು ಉತ್ತಮ ಹಣಕಾಸು ಹೊಂದಿರಬೇಕು. ಇದಕ್ಕಾಗಿ ನಾವು ಹಣಕಾಸಿನ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ‘ಸ್ವದೇಶಿ’ಯಾಗುವುದು ಎಂದರೆ ನಮ್ಮದೇ ನಿಯಮಗಳು ಮತ್ತು ಷರತ್ತುಗಳ ಆಧಾರದಲ್ಲಿ ವ್ಯವಹಾರ ನಡೆಸುವುದು’ ಎಂದು ಭಾಗವತ್ ತಿಳಿಸಿದ್ದಾರೆ.
ಕೈಗಾರಿಕೆಗಳನ್ನು ಬೆಂಬಲಿಸುವುದು ಮತ್ತು ಪ್ರೋತ್ಸಾಹಿಸುವುದು ಸರ್ಕಾರದ ಕೆಲಸವಾಗಿದೆ. ದೇಶದ ಅಭಿವೃದ್ಧಿಗೆ ಮುಖ್ಯವಾದುದನ್ನು ಉತ್ಪಾದಿಸಲು ಸರ್ಕಾರ ನಿರ್ದೇಶನಗಳನ್ನು ನೀಡಬೇಕು. ಉತ್ಪಾದನೆಯು ಜನ ಕೇಂದ್ರಿತವಾಗಬೇಕು ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.