ನವದೆಹಲಿ (ಪಿಟಿಐ): ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮೀಸಲಾತಿಯನ್ನು ಬಲವಾಗಿ ಬೆಂಬಲಿಸುತ್ತದೆ’ ಎಂದು ಪ್ರತಿಪಾದಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ‘ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವವರೆಗೂ ಮೀಸಲಾತಿ ಮುಂದುವರಿಯಬೇಕು’ ಎಂದು ಮಂಗಳವಾರ ಹೇಳಿದರು.
ಭಾರತ ಪ್ರತಿಷ್ಠಾನ ಆಯೋಜಿಸಿದ್ದ ‘ಮೇಕರ್ಸ್ ಆಫ್ ಮಾಡರ್ನ್ ದಲಿತ್ ಹಿಸ್ಟರಿ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತದ ಇತಿಹಾಸವು ದಲಿತರ ಇತಿಹಾಸಕ್ಕಿಂತ ಭಿನ್ನವಾಗಿಲ್ಲ. ದಲಿತರ ಇತಿಹಾಸವಿಲ್ಲದೆ ಭಾರತದ ಇತಿಹಾಸವು ಅಪೂರ್ಣ. ಅವರು ಸಾಮಾಜಿಕ ಬದಲಾವಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ’ ಎಂದು ಒತ್ತಿ ಹೇಳಿದರು.
ಮೀಸಲಾತಿ ಕುರಿತು ಪ್ರಸ್ತಾಪಿಸಿದ ಅವರು, ‘ಆರ್ಎಸ್ಎಸ್ ಯಾವಾಗಲೂ ಮೀಸಲಾತಿ ಬೆಂಬಲಿಸುತ್ತ ಬಂದಿದೆ. ಸಾಮಾಜಿಕ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯ ನಮಗೆ ರಾಜಕೀಯ ತಂತ್ರಗಳಲ್ಲ. ಇವೆರಡೂ ನಮಗೆ ನಂಬಿಕೆಯ ಅಂಶಗಳಾಗಿವೆ’ ಎಂದು ಹೊಸಬಾಳೆ ಹೇಳಿದರು.
‘ಮೀಸಲಾತಿ ಮತ್ತು ಸಮಾಜದ ಎಲ್ಲ ವರ್ಗಗಳ ನಡುವೆ ಸಮನ್ವಯವು ಜೊತೆಯಾಗಿ ಸಾಗಬೇಕು. ಸಾಮಾಜಿಕ ಬದಲಾವಣೆಗೆ ಕಾರಣರಾದ ವ್ಯಕ್ತಿಗಳನ್ನು ‘ದಲಿತ ನಾಯಕರು’ ಎಂದು ಕರೆಯುವುದು ಅನ್ಯಾಯದ ಸಂಗತಿ. ಏಕೆಂದರೆ, ಅವರು ಇಡೀ ಸಮಾಜದ ನಾಯಕರಾಗಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.