ADVERTISEMENT

ಏಕಕಾಲಕ್ಕೆ ಚುನಾವಣೆ, ಪ್ರಧಾನಿ ಮೋದಿ ಕರೆದ ಸರ್ವಪಕ್ಷ ಸಭೆಗೆ ಮಮತಾ ಗೈರು

ಇಂದು ಸಭೆ: ಸರ್ಕಾರ ಆತುರದಲ್ಲಿದೆ ಎಂದು ಮಮತಾ ಪತ್ರ

ಏಜೆನ್ಸೀಸ್
Published 19 ಜೂನ್ 2019, 4:45 IST
Last Updated 19 ಜೂನ್ 2019, 4:45 IST
   

ನವದೆಹಲಿ: ‘ಒಂದು ದೇಶ ಒಂದು ಚುನಾವಣೆ’ ಕುರಿತು ಚರ್ಚಿಸಲುಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕರೆದಿರುವ ರಾಜಕೀಯ ಪಕ್ಷಗಳ ಪ್ರಮುಖರ ಸಭೆಗೆ ಗೈರಾಗಲುಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಮಮತಾ ಬ್ಯಾನರ್ಜಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.ಆದರೆ, ‘ಇಂಥ ಗಂಭೀರ ಮತ್ತು ಸೂಕ್ಷ್ಮ ವಿಚಾರವನ್ನು ಸಾಂವಿಧಾನಿಕ ತಜ್ಞರು, ಚುನಾವಣಾ ಪರಿಣತರೊಂದಿಗೆ ಚರ್ಚಿಸದೇ ಸರ್ಕಾರ ತರಾತುರಿಯಲ್ಲಿ ಈ ಸಭೆಯನ್ನು ಏರ್ಪಾಟು ಮಾಡುತ್ತಿರುವಂತಿದೆ,’ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಚಾರದ ಕುರಿತು ಶ್ವೇತ ಪತ್ರ ಹೊರಡಿಸುವಂತೆಯೂ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ತರಾತುರಿಯಲ್ಲಿ ಯಾವ ಕೆಲಸವನ್ನೂ ಮಾಡುವುದು ಬೇಡ. ಈ ವಿಚಾರದ ಕುರಿತು ಶ್ವೇತ ಪತ್ರ ಹೊರಡಿಸಿ, ಎಲ್ಲ ಪಕ್ಷಗಳಿಗೂ ಸಮಯವಕಾಶ ನೀಡಿ ಪ್ರತಿಕ್ರಿಯೆ ಆಹ್ವಾನಿಸಿ. ಹೀಗೆ ಮಾಡಿದರೆ, ನಾವೂ ಕೂಡ ವಿಚಾರದ ಕುರಿತು ಸಮಗ್ರ ಅಭಿಪ್ರಾಯ ನೀಡಲು ಸಾಧ್ಯ,’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಷಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಒಂದು ದೇಶ ಒಂದು ಚುನಾವಣೆ ವಿಚಾರವಾಗಿ ಚರ್ಚೆಗೆ ಬರುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಅವರು ಸಂಸತ್‌ನಲ್ಲಿ ಸದಸ್ಯರನ್ನು ಹೊಂದಿರುವ ಎಲ್ಲ ಪಕ್ಷಗಳ ಮುಖ್ಯಸ್ಥರಿಗೂ ಶುಕ್ರವಾರ ಪತ್ರ ಬರೆದಿದ್ದರು. ಆ ಪತ್ರಕ್ಕೆ ಮಮತಾ ಬ್ಯಾನರ್ಜಿ ಇಂದು ಹೀಗೆ ಉತ್ತರ ರವಾನಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಸಹ ಸಭೆಗೆ ಗೈರಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.