ನವದೆಹಲಿ: ‘ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಆ ಕಾಯ್ದೆ ಈಗ ಅವಸಾನದ ಅಂಚಿನಲ್ಲಿದೆ’ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಆರ್ಟಿಐ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಸೋಮವಾರವಷ್ಟೇ ಅಂಗೀಕರಿಸಲಾಗಿದೆ. ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಸೋನಿಯಾ, ‘ಆರ್ಟಿಐ ಕಾಯ್ದೆಯು ‘ತೊಂದರೆ ನೀಡುವಂಥದ್ದು’ ಎಂಬ ಭಾವನೆ ಸರ್ಕಾರದಲ್ಲಿ ಗಟ್ಟಿಯಾಗಿದ್ದು, ಆ ಕಾರಣಕ್ಕೆ, ಹೇಗಾದರೂ ಮಾಡಿ ಕೇಂದ್ರ ಮಾಹಿತಿ ಆಯುಕ್ತರ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ’ ಎಂದಿದ್ದಾರೆ.
‘ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ 60 ಲಕ್ಷಕ್ಕೂ ಹೆಚ್ಚು ನಾಗರಿಕರು ಇದರ ಲಾಭ ಪಡೆದಿದ್ದಾರೆ. ಆಡಳಿತದ ಎಲ್ಲಾ ಹಂತಗಳಲ್ಲೂ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಹೊಸ ಸಂಸ್ಕೃತಿಯನ್ನು ತರುವಲ್ಲಿ ಸಹಾಯ ಮಾಡಿದೆ. ಆ ಮೂಲಕ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಂಡಿದೆ’ ಎಂದು ಪ್ರತಿಪಾದಿಸಿದ್ದಾರೆ.
**
ಸೋನಿಯಾ ಹೇಳಿದ್ದೇನು?
* ಆಯುಕ್ತರ ಅಧಿಕಾರ ಕಸಿದುಕೊಳ್ಳಲು ಸರ್ಕಾರದ ಕ್ರಮ
* ದೇಶದ ನಾಗರಿಕರ ಶಕ್ತಿ ಕುಂದಿಸುವ ತಿದ್ದುಪಡಿ
* ಆರ್ಟಿಐ ನಮ್ಮ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿತ್ತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.