ADVERTISEMENT

'ಝಡ್' ಶ್ರೇಣಿಯ ಭದ್ರತೆ ನೀಡುವಂತೆ ಯೋಗಿ ಸರ್ಕಾರಕ್ಕೆ ಮನವಿ ಮಾಡಿದ ಆಜಂ ಖಾನ್

ಐಎಎನ್ಎಸ್
Published 25 ಜುಲೈ 2022, 3:08 IST
Last Updated 25 ಜುಲೈ 2022, 3:08 IST
ಆಜಂ ಖಾನ್‌ (ಪಿಟಿಐ ಚಿತ್ರ)
ಆಜಂ ಖಾನ್‌ (ಪಿಟಿಐ ಚಿತ್ರ)   

ಲಖನೌ:ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ಆಜಂ ಖಾನ್‌ ಅವರುತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದು, ಈ ಹಿಂದೆ ನೀಡಿದ್ದ ಝಡ್‌ ಶ್ರೇಣಿಯ ಭದ್ರತೆಯನ್ನುಉತ್ತರ ಪ್ರದೇಶ ಸರ್ಕಾರ ಮತ್ತೆ ಒದಗಿಸಬೇಕು ಎಂದುಮನವಿ ಮಾಡಿದ್ದಾರೆ.

ಬೆದರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಖಾನ್‌, 'ನನಗೆ ಈ ಮೊದಲು 'ಝಡ್' ಶ್ರೇಣಿಯ ಭದ್ರತೆ ನೀಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಶಿಫಾರಸ್ಸು ಮಾಡಿರುವುದರ ಹೊರತಾಗಿಯೂ, ಈಗಿನ ಸರ್ಕಾರ ಅದನ್ನು ಹಿಂಪಡೆದಿದೆ. ಸದ್ಯ 'ವೈ' ಶ್ರೇಣಿಯ ಭದ್ರತೆ ನೀಡಲಾಗುತ್ತಿದೆ. ಆದರೆ, ಇದು ಎಲ್ಲ ಶಾಸಕರಿಗೆ ನೀಡುವ ಭದ್ರತೆಯನ್ನೇ ಹೋಲುತ್ತದೆ. ನನ್ನ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ. ಹೀಗಾಗಿ,ನನಗೆ ಈ ಮೊದಲು ನೀಡಲಾಗಿದ್ದ (ಝಡ್‌ ಶ್ರೇಣಿ) ಭದ್ರತೆಯನ್ನು ಮರುಸ್ಥಾಪಿಸಬೇಕು ಎಂದು ಕೇಳಿಕೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ.

ರಾಮ್‌ಪುರ ಎಸ್‌ಪಿ ಅಶೋಕ್‌ ಕುಮಾರ್‌ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

'ಭದ್ರತೆ ಹೆಚ್ಚಿಸುವಂತೆ ಕೋರಲಾದ ಯಾವುದೇ ಅರ್ಜಿಆಜಂ ಖಾನ್‌ ಅವರಿಂದ ನಮಗೆ ಬಂದಿಲ್ಲ. ಅವರಿಗೆ 'ವೈ' ಶ್ರೇಣಿಯ ಭದ್ರತೆ ನೀಡಲಾಗುತ್ತಿದೆ. ಅಗತ್ಯ ಸಂಖ್ಯೆಯ ಭದ್ರತಾ ಸಿಬ್ಬಂದಿ ಯಾವಾಗಲೂ ಅವರೊಂದಿಗೆ ಇರಲಿದ್ದಾರೆ. ಆದಾಗ್ಯೂ, ಅವರಿಗೆ ಇರುವ ಬೆದರಿಕೆ ಕುರಿತು ಸ್ಥಳೀಯ ಗುಪ್ತಚರ ಘಟಕದಿಂದ ಮಾಹಿತಿ ಪಡೆಯುತ್ತೇವೆ. ಅದರಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.

ಸೀತಾಪುರಜಿಲ್ಲೆಯ ಜೈಲಿನಲ್ಲಿ 27 ತಿಂಗಳು ಇದ್ದ ಆಜಂ ಖಾನ್‌, ಮೇ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರ ವಿರುದ್ಧ ಕಳ್ಳತನ, ದಾಖಲೆ ನಕಲು, ಭೂ ಒತ್ತುವರಿ ಸೇರಿದಂತೆ 89 ಪ್ರಕರಣಗಳು ದಾಖಲಾಗಿವೆ.

ಜೈಲಿನಲ್ಲಿ ಇದ್ದುಕೊಂಡೇ 2022ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಖಾನ್‌, ಶಾಸಕರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.