
ಸಂಜಯ್ ರಾವುತ್
(ಪಿಟಿಐ ಸಂಗ್ರಹ ಚಿತ್ರ)
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸಚಿವರನ್ನು ಹಿಡಿತದಲ್ಲಿಡಲು ಅವರ ಭ್ರಷ್ಟಾಚಾರ ಪ್ರಕರಣವನ್ನು ಬಳಸುತ್ತಿದ್ದಾರೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಸೋಮವಾರ ಆರೋಪಿಸಿದ್ದಾರೆ.
ಲಂಚ ಪ್ರಕರಣಕ್ಕೆ ಸಂಬಂಧಿಸಿ ಎನ್ಸಿಪಿ (ಅಜಿತ್ ಪವಾರ್) ನಾಯಕ, ಸಚಿವ ನರಹರಿ ಜಿರ್ವಾಲ್ ಅವರ ಇಲಾಖೆಯ ಅಧಿಕಾರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇತ್ತೀಚೆಗೆ ದಾಳಿ ನಡೆಸಿತ್ತು.
ಈ ದಾಳಿಯನ್ನು ಉಲ್ಲೇಖಿಸಿದ ರಾವುತ್, ‘ಸಚಿವರ ಕಚೇರಿಗಳ ಮೇಲೆ ಎಸಿಬಿ ದಾಳಿ ಮಾಡಿ, ಕ್ರಮ ಕೈಗೊಳ್ಳುವ ಬದಲು ಕ್ಲೀನ್ ಚಿಟ್ ನೀಡುತ್ತದೆ. ಭ್ರಷ್ಟರಾಗಿ ಇರಿ, ಆದರೆ ಫಡಣವೀಸ್ ಅವರ ನಿಯಂತ್ರಣದಲ್ಲಿರಿ ಎಂದು ಸರ್ಕಾರ ಸಂದೇಶ ಕಳುಹಿಸುತ್ತಿದೆ’ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ವಿಷಯದಲ್ಲಿ ಫಡಣವೀಸ್ ‘ಕಪಟಿ’ ಎಂದು ಹೇಳಿದ ರಾವುತ್, ‘ರಾಜ್ಯದ ಎಲ್ಲಾ ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಎಸಿಬಿ ಅವರ ಮೇಲೆ ನಿಗಾ ಇಟ್ಟಿದ್ದರೂ, ಫಡಣವೀಸ್ ನಿರ್ದೇಶನ ನೀಡುವವರೆಗೆ ಅದು ಕ್ರಮ ಕೈಗೊಳ್ಳುವುದಿಲ್ಲ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.