ADVERTISEMENT

ಭಾರತ ವಿಭಜನೆಯನ್ನು ಅಫ್ಗಾನಿಸ್ತಾನದ ಪರಿಸ್ಥಿತಿಗೆ ಹೋಲಿಸಿದ ಸಂಜಯ್ ರಾವುತ್

ಪಿಟಿಐ
Published 22 ಆಗಸ್ಟ್ 2021, 10:48 IST
Last Updated 22 ಆಗಸ್ಟ್ 2021, 10:48 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಭಾರತದ ವಿಭಜನೆಯನ್ನು ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ಹೋಲಿಸಿರುವ ಶಿವಸೇನಾ ಸಂಸದ ಸಂಜಯ್‌ ರಾವುತ್‌, ಇದು ದೇಶದ ಅಸ್ತಿತ್ವ ಮತ್ತು ಸಾರ್ವಭೌಮತ್ವದ ನಾಶದ ನೋವನ್ನು ಜನರಿಗೆ ನೆನಪಿಸುತ್ತದೆ ಎಂದಿದ್ದಾರೆ.

ನಾಥೂರಾಮ್ ಗೋಡ್ಸೆ, ಮಹಾತ್ಮ ಗಾಂಧಿ ಅವರನ್ನು ಕೊಲ್ಲುವ ಬದಲಿಗೆ ಪಾಕಿಸ್ತಾನದ ರಚನೆಗೆ ಕಾರಣಕರ್ತನಾದ ಜಿನ್ನಾ ಅವರನ್ನು ಕೊಂದಿದ್ದರೆ ದೇಶದ ವಿಭಜನೆಯನ್ನು ತಪ್ಪಿಸಬಹುದಿತ್ತು. ಆಗ ಆಗಸ್ಟ್ 14 ಅನ್ನು ದೇಶ ‘ವಿಭಜನೆಯ ಕ್ರೌರ್ಯದ ನೆನಪಿನ ದಿನ’ವನ್ನಾಗಿ ಆಚರಿಸುವ ಅಗತ್ಯವೇ ಬರುತ್ತಿರಲಿಲ್ಲ ಎಂದು ಅವರು ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗುವ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

ದೇಶದ ಒಡೆದ ಭಾಗವನ್ನು ಮತ್ತೆ ಸೇರಿಸದ ಹೊರತು ವಿಭಜನೆಯ ನೋವು ಮರೆಯಾಗುವುದಿಲ್ಲ. ಮನಸ್ಸಿಗೆ ನೆಮ್ಮದಿಯೂ ಸಿಗುವುದಿಲ್ಲ ಎಂದು ಮರಾಠಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿರುವ ಅವರು ಹೇಳಿದ್ದಾರೆ.

ADVERTISEMENT

‘ಅಖಂಡ ಹಿಂದುಸ್ತಾನ’ ಆಗಬೆಕು ಎಂದು ನಾವು ಭಾವಿಸಿದರೂ ಅದು ಸಾಧ್ಯವಾಗಿಲ್ಲ. ಆದರೆ ಭರವಸೆ ಮಾತ್ರ ಶಾಶ್ವತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಅಖಂಡ ಹಿಂದುಸ್ತಾನ’ ಬೇಕಾಗಿದ್ದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಅದಕ್ಕಾಗಿ ಅವರು, ಪಾಕಿಸ್ತಾನದ ಸುಮಾರು 11 ಕೋಟಿ ಮುಸ್ಲಿಮರ ಬಗ್ಗೆ ಯಾವ ಯೋಜನೆ ಹೊಂದಿದ್ದಾರೆ ಎಂಬುದನ್ನು ತಿಳಿಸಬೇಕು ಎಂದಿದ್ದಾರೆ.

ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆ ಕಲ್ಪಿಸಿದಾಗ ಮಹಾತ್ಮ ಗಾಂಧಿ ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ ಎಂದು ರಾವುತ್‌ ಹೇಳಿದ್ದಾರೆ.

ಪಂಡಿತ್‌ ಜವಾಹರಲಾಲ್‌ ನೆಹರೂ ಅವರು ಮುಸ್ಲಿಮರ ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ರದ್ದುಪಡಿಸಿದರು ಮತ್ತು ಭಾರತವು ಸ್ವಾತಂತ್ರ್ಯ ಪಡೆದಾಗ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಿದರು ಎಂದಿರುವ ರಾವುತ್‌, ಮುಸ್ಲಿಂ ನಾಯಕರ ಅಸಮಂಜಸ ಬೇಡಿಕೆಗಳನ್ನು ಗಾಂಧಿ ನಿರಾಕರಿಸಿದಾಗ, ಮುಸ್ಲಿಂ ನಾಯಕರು ಕಾಂಗ್ರೆಸ್‌ ತೊರೆದರು ಎಂದು ಅಂಕಣದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.