ಚೆನ್ನೈ: ಮದುರೈ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸಂಸ್ಕೃತದ 'ಚರಕ ಶಪಥ’ ಬೋಧಿಸಿದ ವಿಚಾರವಾಗಿ ವರ್ಗಾವಣೆಗೊಂಡಿದ್ದ ಕಾಲೇಜಿನ ಡೀನ್ ಡಾ. ಎ. ರಥಿನಾವೆಲ್ ಅವರನ್ನು ಬುಧವಾರ ಮರು ನೇಮಕ ಮಾಡಲಾಗಿದೆ.
ಇಂಗ್ಲಿಷ್ ಭಾಷೆಯ ‘ಹಿಪೊಕ್ರಾಟಿಕ್’ ಹೆಸರಿನ ಪ್ರಮಾಣವಚನದ (ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸಲಾಗುವ ಪ್ರಮಾಣವಚನ) ಬದಲಿಗೆ ಚರಕ ಶಪಥ ಬೋಧಿಸಲಾಗಿತ್ತು. ಇದು ವಿವಾದಕ್ಕೀಡಾದ ಬೆನ್ನಲ್ಲೇ ರಥಿನಾವೆಲ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
ಇದೀಗ ಅವರನ್ನು ಮರು ನೇಮಕ ಮಾಡಿರುವ ಬಗ್ಗೆ ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ಮಾಹಿತಿ ನೀಡಿದ್ದಾರೆ.
‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಮಧ್ಯ ಪ್ರವೇಶದ ಬಳಿಕ ರಥಿನಾವೆಲ್ ಅವರನ್ನು ಮರು ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಚರಕ ಶಪಥ ಬೋಧಿಸಿದ ವಿಚಾರವಾಗಿ ಅವರು ವಿಷಾದ ವ್ಯಕ್ತಪಡಿಸಿದ್ದರು. ಅಲ್ಲದೆ, ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಅವರು ಮಾಡಿದ್ದ ಉತ್ತಮ ಕೆಲಸವನ್ನೂ ಪರಿಗಣಿಸಿ ಮರು ನೇಮಕ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ವೈದ್ಯಕೀಯ ಕಾಲೇಜುಗಳ ಪ್ರಮಾಣವಚನ ಕಾರ್ಯಕ್ರಮಗಳಲ್ಲಿ ‘ಹಿಪೊಕ್ರಾಟಿಕ್’ ಮುಂದುವರಿಯಲಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.