ADVERTISEMENT

ರಾಜಕೀಯಕ್ಕೆ ಸಿಬಿಐ ಬಳಕೆ: ಆರೋಪ

ಬಹುಕೋಟಿ ಶಾರದಾ ಚಿಟ್‌ ಫಂಡ್‌ ಹಗರಣ

​ಪ್ರಜಾವಾಣಿ ವಾರ್ತೆ
Published 1 ಮೇ 2019, 20:01 IST
Last Updated 1 ಮೇ 2019, 20:01 IST

ನವದೆಹಲಿ: ಬಹುಕೋಟಿ ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಕೋಲ್ಕತ್ತ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ಬಂಧಿಸಲು ಸಿಬಿಐ ಮುಂದಾಗಿರುವುದು ರಾಜಕೀಯ ಪ‍್ರೇರಿತ ನಡೆಯಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಆರೋಪಿಸಿದೆ.

ಬಿಜೆಪಿಯ ಹಿರಿಯ ನಾಯಕರ ಸೂಚನೆಯಂತೆ ಸಿಬಿಐ ವರ್ತಿಸುತ್ತಿದೆ ಎಂದು ಆರೋಪಿಸಿದೆ.

ರಾಜೀವ್‌ ಕುಮಾರ್‌ ಮತ್ತು ಪಶ್ಚಿಮ ಬಂಗಾಳ ಪರ ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠದ ಮುಂದೆ ಈ ಬಗ್ಗೆ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ‘ಸಿಬಿಐನ ಇತ್ತೀಚಿನ ನಡೆ ರಾಜಕೀಯ ಆಟವಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ರಾಜೀವ್‌ಕುಮಾರ್‌ ಅವರನ್ನು ಬಂಧಿಸದಂತೆ ಫೆಬ್ರುವರಿ 5ರಂದು ನ್ಯಾಯಾಲಯ ನೀಡಿರುವ ಆದೇಶವನ್ನು ಬದಲಾಯಿಸುವಂತೆ ಸಿಬಿಐ ಸಲ್ಲಿಸಿರುವ ಅರ್ಜಿಗೆ ಸಿಂಘ್ವಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಡೈರಿ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ತನಿಖಾಧಿಕಾರಿಗಳ ಹೇಳಿಕೆಗಳನ್ನು ಮಂಡಿಸಿದ ಸಾಲಿಸಿಟರಲ್‌ ಜನರಲ್‌ ತುಷಾರ್‌ ಮೆಹ್ತಾ, ‘ತಾವು ಬಯಸಿದಂತೆಯೇ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ರಾಜೀವ್‌ ಕುಮಾರ್‌ ಸೂಚನೆ ನೀಡುತ್ತಿದ್ದರು’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಂಘ್ವಿ, ‘ಹಲವು ಲ್ಯಾಪ್‌ಟಾಪ್‌ಗಳು ಮತ್ತು ಡೈರಿಗಳು ಐದು ವರ್ಷಗಳಿಂದ ಸಿಬಿಐ ಬಳಿಯಿದ್ದರೂ ಅದು ಮಲಗಿತ್ತು. ಸಾಕ್ಷ್ಯಗಳ ನಾಶಕ್ಕೆ ಸೆಕ್ಷನ್‌ 201ರ ಅಡಿಯಲ್ಲಿ ಎಫ್‌ಐಆರ್‌ ಸಹ ದಾಖಲಿಸಿಲ್ಲ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.