ADVERTISEMENT

ವಿ.ಕೆ ಶಶಿಕಲಾ ಜ.27ಕ್ಕೆ ಬಿಡುಗಡೆ: ತಮಿಳುನಾಡು ರಾಜಕೀಯ ವಲಯದಲ್ಲಿ ಕುತೂಹಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 16:11 IST
Last Updated 19 ಜನವರಿ 2021, 16:11 IST
ವಿ.ಕೆ ಶಶಿಕಲಾ
ವಿ.ಕೆ ಶಶಿಕಲಾ    

ಚೆನ್ನೈ: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಮಾಜಿ ನಾಯಕಿ, ವಿ. ಕೆ. ಶಶಿಕಲಾ ಅವರು ತಮ್ಮ ಶಿಕ್ಷೆ ಅವಧಿ ಪೂರ್ಣಗೊಳಿಸಿ ಜನವರಿ 27ರ ಬೆಳಗ್ಗೆ ಬಿಡುಗಡೆಯಾಗುತ್ತಿದ್ದಾರೆ.

ಈ ಕುರಿತು ವಕೀಲ ಎನ್ ರಾಜಾ ಸೆಂಥೂರ್ ಪಾಂಡಿಯನ್ ಡೆಕ್ಕನ್ ಹೆರಾಲ್ಡ್‌ಗೆ ಮಾಹಿತಿ ನೀಡಿದ್ದಾರೆ. 'ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರಿಂದ ಮಂಗಳವಾರ ಸಂಜೆ ಇ-ಮೇಲ್ ಬಂದಿದೆ. ಶಶಿಕಲಾ ಅವರು, ಜ. 27ರ ಬೆಳಗ್ಗೆ ಬಿಡುಗಡೆಯಾಗಲು ಅರ್ಹವಾಗಿದ್ದಾರೆ ಎಂದು ಅದರಲ್ಲಿ ತಿಳಿಸಲಾಗಿದೆ. ಅದರ ಅರ್ಥ, ಶಶಿಕಲಾ ಅವರು 27ರಂದು ಬಿಡುಗಡೆಯಾಗುವುದು ಖಚಿತವಾಗಿದೆ,' ಎಂದು ಹೇಳಿದ್ದಾರೆ.

ಶಶಿಕಲಾ ಬಿಡುಗಡೆ ಕುರಿತು ಪಾಂಡಿಯನ್‌ ಈ ಹಿಂದೆ ಮಾಡಿದ್ದ ಈ ಮೇಲ್‌ಗೆ ಪ್ರತಿಯಾಗಿ ಜೈಲು ಅಧೀಕ್ಷಕರು ಉತ್ತರ ನೀಡಿದ್ದಾರೆ.

ADVERTISEMENT

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಶಶಿಕಲಾ ಅವರು ಸೇರಿ ನಾಲ್ವರು ದೋಷಿಗಳು ಎಂದು 2014ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಶಶಿಕಲಾ ಅವರು ಫೆ.15ರಂದು 2017ರಲ್ಲಿ ಜೈಲು ಅಧಿಕಾರಿಗಳಿಗೆ ಶರಣಾಗಿದ್ದರು.

ತಮಿಳುನಾಡು ಇನ್ನೇನು ವಿಧಾನಸಭೆ ಚುನಾವಣೆ ಎದುರಿಸುವ ಹೊಸ್ತಿಲಲಲ್ಲಿದೆ. ಇಂಥ ಸನ್ನಿವೇಶದಲ್ಲಿ ವಿ.ಕೆ ಶಶಿಕಲಾ ಆಗಮನವು ತಮಿಳುನಾಡಿನ ರಾಜಕೀಯದಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಕುರಿತು ಕುತೂಹಲ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.