ADVERTISEMENT

ವಿಮಾ ಹಗರಣ: ಸತ್ಯಪಾಲ್‌ ಮಲಿಕ್‌ರಿಂದ ಸ್ಪಷ್ಟನೆ ಕೇಳಿದ ಸಿಬಿಐ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2023, 16:33 IST
Last Updated 21 ಏಪ್ರಿಲ್ 2023, 16:33 IST
ಸತ್ಯಪಾಲ್‌ ಮಲಿಕ್‌
ಸತ್ಯಪಾಲ್‌ ಮಲಿಕ್‌   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರಿಂದ ಕೆಲ ಸ್ಪಷ್ಟನೆಗಳನ್ನು ಬಯಸಿರುವ ಸಿಬಿಐ, ಇದಕ್ಕಾಗಿ ತನ್ನ ಎದುರು ಹಾಜರಾಗುವಂತೆ ಅವರಿಗೆ ಸೂಚಿಸಿದೆ.

ಸರ್ಕಾರಿ ನೌಕರರಿಗೆ ವೈದ್ಯಕೀಯ ವಿಮೆ ಒದಗಿಸುವುದಕ್ಕೆ ಸಂಬಂಧಿಸಿದ ಗುತ್ತಿಗೆ ನೀಡುವಲ್ಲಿ ಹಾಗೂ ಕೀರು ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ₹2,200 ಕೋಟಿ ಮೊತ್ತದ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಮಲಿಕ್‌ ಆರೋಪಿಸಿದ್ದರು. ಈ ಸಂಬಂಧ ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಿಬಿಐ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

‘ತಾವು ಮಾಡಿರುವ ಆರೋಪಕ್ಕೆ ಸಂಬಂಧಿಸಿ ಕೆಲ ಮಾಹಿತಿಗಳನ್ನು ಒದಗಿಸುವಂತೆ ಸಿಬಿಐ ಅಧಿಕಾರಿಗಳು ಮಲಿಕ್‌ ಅವರಿಗೆ ಸೂಚಿಸಿದ್ದಾರೆ’ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದರು.

ADVERTISEMENT

‘ಸಿಬಿಐ ಅಧಿಕಾರಿಗಳು ನನಗೆ ಸಮನ್ಸ್‌ ನೀಡಿಲ್ಲ. ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಕೆಲ ವಿಚಾರಗಳ ಕುರಿತು ಸ್ಪಷ್ಟನೆ ಕೇಳಿದ್ದಾರೆ. ಇದಕ್ಕಾಗಿ ದೆಹಲಿಯ ಅಕ್ಬರ್‌ ರಸ್ತೆಯಲ್ಲಿರುವ ಸಿಬಿಐ ಅತಿಥಿ ಗೃಹಕ್ಕೆ ಹಾಜರಾಗುವಂತೆ ನಿರ್ದೇಶಿಸಿದ್ದಾರೆ’ ಎಂದು ಮಲಿಕ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾನು ರಾಜಸ್ಥಾನ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಇದೇ 27 ರಿಂದ 29ರವರೆಗೂ ಲಭ್ಯ ಇರುವುದಾಗಿ ಹೇಳಿದ್ದೇನೆ. ಬಹುಶಃ ಇದೇ 28ರಂದು ಸಿಬಿಐ ಎದುರು ಹಾಜರಾಗುತ್ತೇನೆ’ ಎಂದಿದ್ದಾರೆ.

‘ಸತ್ಯ ನುಡಿಯುವ ಮೂಲಕ ಕೆಲವರ ಪಾಪ ಕೃತ್ಯಗಳನ್ನು ಜಗಜ್ಜಾಹೀರುಗೊಳಿಸಿದ್ದೇನೆ. ಹೀಗಾಗಿಯೇ ಸಿಬಿಐನವರಿಂದ ಈ ಕರೆ ಬಂದಿದೆ. ನಾನು ರೈತನ ಮಗ. ಇದರಿಂದ ವಿಚಲಿತನಾಗುವುದಿಲ್ಲ. ಸತ್ಯದ ಪರವಾಗಿಯೇ ನಿಲ್ಲುತ್ತೇನೆ’ ಎಂದು ಮಲಿಕ್‌ ಟ್ವೀಟ್‌ ಮಾಡಿದ್ದಾರೆ.

ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌‍ಪಿಎಫ್‌ ಅದಕ್ಷತೆಯೇ ಕಾರಣ. ಇದು ಸರ್ಕಾರದ್ದೇ ಲೋಪ. ಈ ಬಗ್ಗೆ ಏನೂ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನನಗೆ ತಾಕೀತು ಮಾಡಿದ್ದರು ಎಂದು ಮಲಿಕ್‌ ಇತ್ತೀಚೆಗೆ ‘ದಿ ವೈರ್‌’ ಪೋರ್ಟಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.