ADVERTISEMENT

ದೇಶದ್ರೋಹ ಕಾನೂನಿನ ದುರ್ಬಳಕೆ: ಕೇಂದ್ರದ ಪ್ರತಿಕ್ರಿಯೆಗೆ ಸೂಚಿಸಿದ ‘ಸುಪ್ರೀಂ’

ಪಿಟಿಐ
Published 15 ಜುಲೈ 2021, 10:44 IST
Last Updated 15 ಜುಲೈ 2021, 10:44 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದೇಶದ್ರೋಹಕ್ಕೆ ಸಂಬಂಧಿಸಿದಂತೆ ‘ವಸಾಹತುಶಾಹಿ ಕಾಲ’ದ ಕಾನೂನು ದುರುಪಯೋಗ ಆಗುತ್ತಿರುವುದಕ್ಕೆ ಗುರುವಾರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌, ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಎಡಿಟರ್ಸ್‌ ಗಿಲ್ಡ್‌ ಸೇರಿದಂತೆ ಕೆಲವರು ಸಲ್ಲಿಸಿರುವ ಅರ್ಜಿಗಳವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ನೇತೃತ್ವದ ನ್ಯಾಯಪೀಠವು, ಹಳೆಯ ಕಾನೂನುಗಳನ್ನು ರದ್ದುಪಡಿಸುತ್ತಿರುವ ಕೇಂದ್ರ ಸರ್ಕಾರ, ಈ ವಿಚಾರದಲ್ಲಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕೇಳಿತು.

ಬ್ರಿಟಿಷರು ಜಾರಿಗೊಳಿಸಿದ ದೇಶದ್ರೋಹ ಕಾನೂನು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿತ್ತು. ಮಹಾತ್ಮ ಗಾಂಧಿ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸುಮ್ಮನಿರಿಸಲು ಬ್ರಿಟಿಷರು ಈ ಕಾಯ್ದೆಯನ್ನು ಬಳಸಿಕೊಂಡರು ಎಂದು ಪೀಠ ತಿಳಿಸಿತು.

ADVERTISEMENT

ಈ ಕಾನೂನಿನ ಸಿಂಧುತ್ವವನ್ನ ಸಮರ್ಥಿಕೊಳ್ಳುವಾಗ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು, ದೇಶದ್ರೋಹ ಕಾನೂನಿನ ದುರುಪಯೋಗ ತಡೆಯಲು ಕೆಲ ಮಾರ್ಗಸೂಚಿಗಳನ್ನು ರೂಪಿಸಬಹುದು ಎಂದರು.

ಐಪಿಸಿ ಸೆಕ್ಷನ್‌ 124ಎ (ದೇಶದ್ರೋಹ) ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಿವೃತ್ತ ಸೇನಾಧಿಕಾರಿ ಮೇಜರ್‌ ಜನರಲ್‌ ಎಸ್‌.ಜಿ.ಒಂಬತ್ತುಕೆರೆ ಅವರೂ ಅರ್ಜಿ ಸಲ್ಲಿಸಿದ್ದಾರೆ. ಇದು ಸಂವಿಧಾನವು ಮೂಲಭೂತ ಹಕ್ಕಿನಡಿ ನೀಡಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕನ್ನು ಚ್ಯುತಿಗೊಳಿಸುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.