ADVERTISEMENT

ಜಾಹೀರಾತಿಗೆ ಸಾರ್ವಜನಿಕ ನಿಧಿ: ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 15:35 IST
Last Updated 26 ಸೆಪ್ಟೆಂಬರ್ 2022, 15:35 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ:ಸರ್ಕಾರದ ಜಾಹೀರಾತುಗಳಿಗೆ ಸಾರ್ವಜನಿಕ ಹಣ ಬಳಕೆ ಸಂಪೂರ್ಣ ಅಸಮರ್ಪಕ, ಸ್ವೇಚ್ಛಾಚಾರ ಮತ್ತು ನಂಬಿಕೆ ದ್ರೋಹ ಎಂದು ಪ್ರತಿಪಾದಿಸಿರುವ ಸರ್ಕಾರೇತರ ಸಂಸ್ಥೆ ‘ಕಾಮನ್‌ ಕಾಸ್‌’ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ನೀಡಿದೆ.

ಸರ್ಕಾರದ ಜಾಹೀರಾತುಗಳಲ್ಲಿ ನ್ಯಾಯಾಲಯದ ಮಾರ್ಗಸೂಚಿ ಮತ್ತು ನಿರ್ದೇಶಗಳನ್ನು ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದು, ಇದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಸೂಚಿಸಿತು.

ವಕೀಲರಾದ ಪ್ರಶಾಂತ್‌ ಭೂಷಣ್‌ ಮತ್ತು ಚೆರಿಲ್ ಡಿಸೋಜಾ ನೇತೃತ್ವದಲ್ಲಿ ಅರ್ಜಿದಾರರು,ವಾಣಿಜ್ಯಶೃಂಗಸಭೆಗಳು, ಸಮಾಲೋಚನೆ ಅಥವಾ ಪ್ರವಾಸೋದ್ಯಮ ಆಕರ್ಷಣೆ ಮತ್ತು ಖಾಸಗಿ ಹೂಡಿಕೆಗಳಿಗಾಗಿ ಪಾಲುದಾರರನ್ನು ಆಹ್ವಾನಿಸಲು ನೀಡುವ ಜಾಹೀರಾತುಗಳನ್ನು ಹೊರತುಪಡಿಸಿ,ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯ ಹೊರಗೆ ಜಾಹೀರಾತು ಪ್ರಕಟಿಸುವುದನ್ನು ನಿಷೇಧಿಸುವ ಆದೇಶ ಹೊರಡಿಸುವಂತೆ ಕೋರಿದರು.

ADVERTISEMENT

ಅಡ್ವಟೋರಿಯಲ್‌ ರೂಪದಲ್ಲಿ ಸರ್ಕಾರಿ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಷೇಧಿಸಬೇಕು. ಚುನಾವಣೆಗೆ ಮೂರು ತಿಂಗಳ ಮೊದಲು ಸರ್ಕಾರಿ ಜಾಹೀರಾತುಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಪ್ರಕಟಿಸುವುದನ್ನು ನಿಷೇಧಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.