ನವದೆಹಲಿ: ತಮ್ಮ ವಿರುದ್ಧದ ಎಲ್ಲ ವಿಚಾರಣೆಗಳನ್ನು ಮಹಾರಾಷ್ಟ್ರದ ಹೊರಗಡೆಯ ಸ್ವತಂತ್ರ ಸಂಸ್ಥೆಯೊಂದಕ್ಕೆ ವರ್ಗಾಯಿಸಬೇಕು ಎಂದು ಕೋರಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮಂಗಳವಾರ ಹಿಂದೆ ಸರಿದರು.
ಪರಮ್ವೀರ್ ಸಿಂಗ್ ಅವರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಹಾಗೂ ಬಿ.ಆರ್.ಗವಾಯಿ ಅವರಿರುವ ರಜಾಕಾಲದ ನ್ಯಾಯಪೀಠ ನಡೆಸಬೇಕಿತ್ತು. ನ್ಯಾಯಮೂರ್ತಿ ಸರನ್ ಅವರು, ‘ಈ ಅರ್ಜಿಯ ವಿಚಾರಣೆ ನಡೆಸಲುನ್ಯಾಯಮೂರ್ತಿ ಗವಾಯಿ ಅವರಿಗೆ ಕೆಲವು ಅಡಚಣೆಗಳಿವೆ. ಬೇರೆ ಪೀಠದ ಮುಂದೆ ಈ ಅರ್ಜಿಯನ್ನು ಮಂಡಿಸಿ ಎಂದಷ್ಟೇ ನಾವು ಹೇಳಬಲ್ಲೆವು’ ಎಂದು ಹೇಳಿದರು.
ನ್ಯಾಯಮೂರ್ತಿ ಗವಾಯಿ ಅವರೂ ಮಾತನಾಡಿ, ‘ನಾನು ಈ ಅರ್ಜಿಯ ವಿಚಾರಣೆ ಮಾಡುವುದಿಲ್ಲ. ನಾವಿಬ್ಬರೂ ಸದಸ್ಯರಾಗಿರದ ಬೇರೆ ಪೀಠಕ್ಕೆ ಈ ಅರ್ಜಿಯನ್ನು ಸಲ್ಲಿಸಿ ’ ಎಂದು ಹೇಳಿದರು.
ಪರಮ್ವೀರ್ ಸಿಂಗ್ ಅವರು ತಾವು ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ವೇಳೆ, ಗೃಹ ಸಚಿವರಾಗಿದ್ದ ಅನಿಲ್ ದೇಶಮುಖ್ ಅವರು ಹಣ ವಸೂಲಿಗೆ ಸೂಚಿಸಿದ್ದರು ಹಾಗೂ ಭ್ರಷ್ಟಾಚಾರ ಎಸಗಿದ್ದರು ಎಂದು ಆರೋಪ ಮಾಡಿದ್ದರು. ನಂತರ ಮಾರ್ಚ್ 17ರಂದು ಸಿಂಗ್ ಅವರನ್ನು ಕಮಿಷನರ್ ಹುದ್ದೆಯಿಂದ ತೆಗೆದು ಹಾಕಿದ್ದ ಮಹಾರಾಷ್ಟ್ರ ಸರ್ಕಾರ, ಅವರನ್ನು ಗೃಹರಕ್ಷಕ ದಳದ ಜನರಲ್ ಕಮಾಂಡರ್ ಹುದ್ದೆಗೆ ವರ್ಗಾಯಿಸಿತ್ತು.
ಅನಿಲ್ ದೇಶಮುಖ್ ವಿರುದ್ಧಸಿಂಗ್ ಮಾಡಿದ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದ ಕಾರಣ, ದೇಶಮುಖ್ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.