ನವದೆಹಲಿ: ಅಂತರಧರ್ಮೀಯ ವಿವಾಹಗಳಿಂದಾಗಿ ಆಗುವ ಧಾರ್ಮಿಕ ಮತಾಂತರವನ್ನು ನಿಯಂತ್ರಿಸುವ ರಾಜ್ಯದ ಕಾನೂನನ್ನು ಪ್ರಶ್ನಿಸಿರುವ 21 ಪ್ರಕರಣಗಳನ್ನು ವರ್ಗಾಯಿಸುವಂತೆ ಕೋರಿ ಮುಸ್ಲಿಂ ಸಂಘಟನೆಯೊಂದು ಸಲ್ಲಿಸಿರುವ ಮನವಿಯ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಂದ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ಈ ಸಂಬಂಧ ವಕೀಲ ಎಂ.ಆರ್. ಷಂಷಾದ್ ಮೂಲಕ ಜಮೈತ್ ಉಲಮಾ–ಎ– ಹಿಂದ್ ಸಂಘಟನೆಯು ಸಲ್ಲಿಸಿದ ಮನವಿಯ ಮೇರೆಗೆ ನೋಟಿಸ್ ಜಾರಿಗೊಳಿಸಿ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.
ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ಆಯಾ ರಾಜ್ಯಗಳ ಕಾನೂನುಗಳನ್ನು ಪ್ರಶ್ನಿಸಿರುವ ಅರ್ಜಿಗಳ ಪೈಕಿ ಗುಜರಾತ್ ಹೈಕೋರ್ಟ್ನಲ್ಲಿ ಮೂರು, ಅಲಹಾಬಾದ್ ಹೈಕೋರ್ಟ್ನಲ್ಲಿ ಐದು, ಹಿಮಾಚಲ ಪ್ರದೇಶ ಹೈಕೋರ್ಟ್ ಮತ್ತು ಜಾರ್ಖಂಡ್ ಹೈಕೋರ್ಟ್ನಲ್ಲಿ ತಲಾ ಮೂರು, ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಆರು ಮತ್ತು ಕರ್ನಾಟಕ ಹೈಕೋರ್ಟ್ನಲ್ಲಿ ಬಾಕಿ ಇರುವ ಒಂದು ಅರ್ಜಿಯನ್ನು ವರ್ಗಾಯಿಸಲು ಮುಸ್ಲಿಂ ಸಂಘಟನೆ ಕೋರಿದೆ.
ಆಮಿಷದ ಅಥವಾ ಬಲವಂತದ ಧಾರ್ಮಿಕ ಮತಾಂತರವನ್ನು ಪ್ರಶ್ನಿಸಿರುವ ಮತ್ತು ರಾಜ್ಯದ ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗಳು ಸೇರಿದಂತೆ ಅರ್ಜಿಗಳ ಸಮೂಹವನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಸಿಜೆಐ ನೇತೃತ್ವದ ಮತ್ತೊಂದು ಪೀಠವು ಜನವರಿ 2ರಂದು ಹೈಕೋರ್ಟ್ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸ್ಥಿತಿಯನ್ನು ತಿಳಿಯಲು ಪ್ರಯತ್ನಿಸಿತ್ತು. ಪ್ರಕರಣಗಳು ಒಂದೇ ರೀತಿಯ ಸ್ವರೂಪದಲ್ಲಿದ್ದರೆ, ಅವುಗಳನ್ನು ವರ್ಗಾಯಿಸಬಹುದು ಎಂದೂ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.