ADVERTISEMENT

ಭಾರಿ ಮಳೆ: ಹೈದರಾಬಾದ್‌ನ ಕೆಲವೆಡೆ ಎರಡನೇ ಬಾರಿ ಪ್ರವಾಹ ಪರಿಸ್ಥಿತಿ

ಶನಿವಾರ ಸಂಜೆಯಿಂದ ಸುರಿದ

ಪಿಟಿಐ
Published 18 ಅಕ್ಟೋಬರ್ 2020, 14:28 IST
Last Updated 18 ಅಕ್ಟೋಬರ್ 2020, 14:28 IST
ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೋರೇಷನ್‌ (ಜಿಎಚ್‌ಎಂಸಿ) ಸಿಬ್ಬಂದಿ ಪ್ರವಾಹದಿಂದ ತೊಂದರೆಗೊಳಗಾದವರನ್ನು ಸುರಕ್ಷಿತ ಜಾಗಗಳಿಗೆ ಭಾನುವಾರ ಸ್ಥಳಾಂತರಿಸಿದರು –ಪಿಟಿಐ ಚಿತ್ರ
ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೋರೇಷನ್‌ (ಜಿಎಚ್‌ಎಂಸಿ) ಸಿಬ್ಬಂದಿ ಪ್ರವಾಹದಿಂದ ತೊಂದರೆಗೊಳಗಾದವರನ್ನು ಸುರಕ್ಷಿತ ಜಾಗಗಳಿಗೆ ಭಾನುವಾರ ಸ್ಥಳಾಂತರಿಸಿದರು –ಪಿಟಿಐ ಚಿತ್ರ   

ಹೈದರಾಬಾದ್‌:ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ತತ್ತರಿಸಿದ್ದ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಶನಿವಾರ ಸಂಜೆಯಿಂದ ಭಾರಿ ಮಳೆ ಸುರಿದಿದೆ. ಹೀಗಾಗಿ, ನಗರದ ಹಲವು ಪ್ರದೇಶಗಳಲ್ಲಿ ಭಾನುವಾರಪರಿಣಾಮ ಎರಡನೇ ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ನಗರದ ಮಂಗಳಹಾತ್‌ ಪ್ರದೇಶದಲ್ಲಿ ಗೋಡೆ ಕುಸಿತ ಪರಿಣಾಮ ಒಬ್ಬ ಬಾಲಕಿ ಮೃತಪಟ್ಟಿದ್ದಾಳೆ.ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಪ್ರದೇಶಗಳಲ್ಲಿಯೇ ಈಗ ಮತ್ತೆ ನೀರು ನಿಂತಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅ. 21ರ ವರೆಗೆ ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ADVERTISEMENT

ಗ್ರೇಟರ್‌ ಹೈದರಾಬಾದ್ ಮುನ್ಸಿಪಲ್‌ ಕಾರ್ಪೋರೇಷನ್, ವಿಪತ್ತು ನಿರ್ವಹಣಾ ಕಾರ್ಯಪಡೆ ಸಿಬ್ಬಂದಿಯಲ್ಲದೇ ಪೊಲೀಸರು ಸಹ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ನೀರು ನಿಂತಿರುವ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕಾರ್ಯ ಶನಿವಾರದಿಂದಲೇ ಆರಂಭಗೊಂಡಿದೆ.

ಅಪಾರ್ಟ್‌ಮೆಂಟ್‌ಗಳ ನೆಲಮಹಡಿಯಲ್ಲಿ ಮೊಣಕಾಲುವರೆಗೆ ನೀರು ನಿಂತಿದ್ದು, ವಾಹನಗಳ ನಿಲುಗಡೆಗೂ ತೊಂದರೆಯಾಗಿದೆ. ಮಳೆ ನೀರಿನ ರಭಸಕ್ಕೆ ಆಟೊಗಳು ತೇಲಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಸರೂರ್‌ನಗರದಲ್ಲಿ ಗರಿಷ್ಠ 16.9 ಸೆಂ.ಮಿ. ಮಳೆ ಬಿದ್ದಿದ್ದರೆ, ಹೈದರಾಬಾದ್ ವಿಮಾನನಿಲ್ದಾಣದಲ್ಲಿ 7.2 ಸೆಂ.ಮೀ. ಬಿದ್ದಿದೆ.

‘ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ನಲುಗಿರುವ ನಗರದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ’ ಎಂದು ಪಾಲಿಕೆ ಆಯುಕ್ತ ಡಿ.ಎಸ್‌.ಲೋಕೇಶ್‌ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.