ADVERTISEMENT

ಸಿಕಂದರಾಬಾದ್‌: ಗೋದಾಮಿನಲ್ಲಿ ಬೆಂಕಿ, ಸುಟ್ಟು ಕರಕಲಾದ 11 ಮಂದಿ ವಲಸೆ ಕಾರ್ಮಿಕರು

ಪಿಟಿಐ
Published 23 ಮಾರ್ಚ್ 2022, 16:03 IST
Last Updated 23 ಮಾರ್ಚ್ 2022, 16:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಭೋಯಿಗುಡದಲ್ಲಿರುವ ಗುಜರಿ ವಸ್ತುಗಳ ಗೋಡೌನ್‌ನಲ್ಲಿ ಬುಧವಾರ ನಸುಕಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಿಹಾರ ಮೂಲದ 11 ವಲಸೆ ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಕಾರ್ಮಿಕರ ದೇಹಗಳು ಗುರುತು ಹಿಡಿಯಲಾಗದಷ್ಟು ಪ್ರಮಾಣದಲ್ಲಿ ಸುಟ್ಟಿದ್ದು, ಡಿಎನ್ಎ ಪರೀಕ್ಷೆಯಿಂದ ಮಾತ್ರವೇ ಸಂತ್ರಸ್ತರ ಗುರುತು ಪತ್ತೆ ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಬೆಂಕಿ ದುರಂತ ಸಂಭವಿಸಿದ ಗೋಡೌನ್‌ ಇದ್ದ ಕಟ್ಟಡದ ಮೇಲಿನ ಕೊಠಡಿಯಲ್ಲಿ ಸಂತ್ರಸ್ತರು ಮಲಗಿದ್ದರು. ಆದರೆ ನಿದ್ದೆಯ ಮಂಪರಿನಿಂದ ಹೊರಬರುವಷ್ಟರಲ್ಲಿ ಅವರು ಬೆಂಕಿಯ ಕೆನ್ನಾಲಿಗೆಗೆ ಸಾವಿಗೀಡಾಗಿದ್ದರು. ಗುಜರಿ ಗೋಡೌನ್‌ನಲ್ಲಿ ಅಗತ್ಯ ಅಗ್ನಿ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲದಿಲ್ಲವೆಂಬುದು ಗೊತ್ತಾಗಿದೆ. ಒಬ್ಬ ವ್ಯಕ್ತಿ ಮಾತ್ರ ಕೊಠಡಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಎಲ್ಲಾ ಸಂತ್ರಸ್ತರು ಬಿಹಾರದ ಚಪ್ರಾ ಜಿಲ್ಲೆಯವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಕೇಂದ್ರ 2 ಲಕ್ಷ ರೂಪಾಯಿ ಪರಿಹಾರ
ಸಜೀವ ದಹನವಾದ ಬಿಹಾರ ಮೂಲದ 11 ವಲಸೆ ಕಾರ್ಮಿಕರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ₹2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.