ADVERTISEMENT

ಬಾಬರಿ ಮಸೀದಿ ಧ್ವಂಸ ದಿನ: ಮಥುರಾದಲ್ಲಿ ನಿಷೇಧಾಜ್ಞೆ, ಭದ್ರತೆ ಹೆಚ್ಚಳ

ಪಿಟಿಐ
Published 5 ಡಿಸೆಂಬರ್ 2021, 2:45 IST
Last Updated 5 ಡಿಸೆಂಬರ್ 2021, 2:45 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಮಥುರಾ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನವಾದ ಡಿ.6ರಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಮಥುರಾದಲ್ಲೂ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1992ರ ಡಿ.6ರಂದು ಬಾಬರಿ ಮಸೀದಿ ಧ್ವಂಸಗೊಳಿಸಲಾಗಿತ್ತು.

ಅಖಿಲ ಭಾರತ ಹಿಂದೂ ಮಹಾಸಭಾ, ಶ್ರೀಕೃಷ್ಣ ಜನ್ಮಭೂಮಿ ನಿರ್ಮಾಣ್ ನ್ಯಾಸ್, ನಾರಾಯಣಿ ಸೇನಾ ಹಾಗೂ ಶ್ರೀಕೃಷ್ಣ ಮುಕ್ತಿ ದಳಗಳು ಡಿ.6ರಂದು ಕಾರ್ಯಕ್ರಮಗಳನ್ನು ಆಯೋಜಿಸಲು ಈ ಹಿಂದೆಯೇ ಅನುಮತಿ ಕೋರಿದ್ದವು.

ADVERTISEMENT

ಮಥುರಾದಲ್ಲಿ ದೇಗುಲಕ್ಕೆ ಹೊಂದಿಕೊಂಡು ಮಸೀದಿ ಇದ್ದು, ಆ ಜಾಗವು ಕೃಷ್ಣನ ಜನ್ಮಸ್ಥಳವಾಗಿದೆ. ಅಲ್ಲಿ ಕೃಷ್ಣನ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಮನವಿ ಮಾಡಿತ್ತು.

ಈ ಮನವಿಯನ್ನು ತಿರಸ್ಕರಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಾಹಲ್, ಶಾಂತಿ ಕದಡುವಂಥ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.

ಮಸೀದಿಯಲ್ಲಿ ‘ಮಹಾ ಜಲಾಭಿಷೇಕ’ ನಡೆಸಿ ಶುದ್ಧೀಕರಣ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಪ್ರತಿಮೆ ಸ್ಥಾಪಿಸುವುದಾಗಿ ಹಿಂದೂ ಸಂಘಟನೆ ಹೇಳಿಕೊಂಡಿತ್ತು.

ಈ ಎಲ್ಲ ಬೆಳವಣಿಗೆಳನ್ನು ಗಮನದಲ್ಲಿ ಇರಿಸಿಕೊಂಡು ಮಥುರಾವನ್ನು ಭದ್ರತಾ ಕಾರಣಗಳಿಗಾಗಿ ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಕೇಶವ ದೇವ ಮಂದಿರ ಹಾಗೂ ಶಾಹಿ ಈದ್ಗಾ ಇರುವ ಪ್ರದೇಶವನ್ನು ‘ರೆಡ್ ಝೋನ್’ ಎಂದು ಪರಿಗಣಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಥುರಾ ಪ್ರವೇಶ ದ್ವಾರದ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಮಥುರಾ ಎಸ್‌ಎಸ್‌ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ.

ಮಥುರಾ ಸುತ್ತಮುತ್ತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ. ನಾಲ್ವರಿಗಿಂತ ಹೆಚ್ಚು ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.