ದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯ ಶಾಹೀನ್ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರತ್ತ ಗುಂಡು ಹಾರಿಸಿದ್ದ ಕಪಿಲ್ ಬೈಸಲ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಎಂದು ದೆಹಲಿ ಪೊಲೀಸರು ಹೇಳಿದ್ದರು. ಆದರೆ ಬೈಸಲ ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ನಂಟು ಹೊಂದಿಲ್ಲ ಎಂದು ಅವರ ಕುಟುಂಬ ಹೇಳಿದೆ.
2019ರಲ್ಲಿ ಬೈಸಲ ಮತ್ತು ಅವರ ಅಪ್ಪಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು ಎಂದು ಡಿಸಿಪಿ (ಅಪರಾಧ ದಳ) ರಾಜೇಶ್ ದಿಯೊ ಹೇಳಿದ್ದರು.ಈ ಹೇಳಿಕೆಯನ್ನು ನಿರಾಕರಿಸಿದ ಕಪಿಲ್ ಬೈಸಲ ಅವರ ಸಂಬಂಧಿ ಫತೇಶ್ ಸಿಂಗ್, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೋಟೊ ಎಲ್ಲಿಂದ ಸಿಕ್ಕಿತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಅಳಿಯ ಕಪಿಲ್ ಮತ್ತು ಆತನ ಕುಟುಂಬ ಯಾವುದೇ ರಾಜಕೀಯ ಪಕ್ಷದೊಂದಿಗೆ ನಂಟು ಹೊಂದಿಲ್ಲ.
ನನ್ನ ಸಹೋದರ ಗಜೇ ಸಿಂಗ್ (ಬೈಸಲ ಅವರ ಅಪ್ಪ) 2008ರಲ್ಲಿ ಬಹುಜನ ಸಮಾಜ ಪಕ್ಷದ ಟಿಕೆಟ್ ಪಡೆದು ಚುನಾವಣೆ ಸ್ಪರ್ಧಿಸಿ ಸೋತಿದ್ದರು. ಇದಾದ ನಂತರ ನಮ್ಮ ಕುಟುಂಬದ ಯಾರೊಬ್ಬರೂ ಯಾವುದೇ ಪಕ್ಷದ ಜತೆ ಸೇರಿಲ್ಲ. ಬೈಸಲ ಅವರಿಗೆ ಎಎಪಿ ಅಥವಾ ಇನ್ಯಾವುದೇ ರಾಜಕೀಯ ಪಕ್ಷದೊಂದಿಗೆ ನಂಟು ಇರುವ ಸ್ನೇಹಿತರು ಇಲ್ಲ ಎಂದಿದ್ದಾರೆ.
ಅದೇ ವೇಳೆಗಜೇ ಸಿಂಗ್ 2012ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಎಸ್ಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ. ಪೊಲೀಸರು ಬೈಸಲ ಅವರ ಮೊಬೈಲ್ ಫೋನ್ ವಶ ಪಡಿಸಿಕೊಂಡಿದ್ದು, ವಾಟ್ಸ್ಆ್ಯಪ್ ಮಾಹಿತಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.