ಮುಂಬೈ : ‘ಶಿವಸೇನಾ ಯಾರಿಗೆ ಸೇರಿದ್ದು ಎಂದು ಪಾಕಿಸ್ತಾನಕ್ಕೂ ತಿಳಿದಿದೆ‘ ಎಂಬ ಉದ್ಧವ್ ಠಾಕ್ರೆ ಹೇಳಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ತಿರುಗೇಟು ನೀಡಿದ್ದು, ‘ಶಿವಸೇನಾ ಯಾರಿಗೆ ಸೇರಿದ್ದು ಎಂದು ನಿರ್ಧರಿಸಲು ಪಾಕಿಸ್ತಾನದ ಪ್ರಮಾಣ ಪತ್ರ ಬೇಕಿರುವುದು ನಿಜಕ್ಕೂ ದುರದೃಷ್ಟಕರ ‘ ಎಂದು ಹೇಳಿದ್ದಾರೆ.
ಭಾನುವಾರ ಸಂಜೆ ಉತ್ತರ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಪಚೋರಾದಲ್ಲಿ ನಡೆದ ಶಿವಸೇನಾ ಪಕ್ಷದ (ಉದ್ಬವ್ ಠಾಕ್ರೆ ಬಣ) ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಉದ್ದವ್ ಠಾಕ್ರೆ, ‘ಜನರಿಂದ ನಮ್ಮ ಪಕ್ಷಕ್ಕೆ ಸಿಗುತ್ತಿರುವ ಬೆಂಬಲ ನೋಡಿದರೆ ಪಾಕಿಸ್ತಾನವೂ ಹೇಳುತ್ತದೆ ಶಿವಸೇನೆ ಯಾರಿಗೆ ಸೇರಿದ್ದು ಎಂದು. ಆದರೆ, ಚುನಾವಣಾ ಆಯೋಗಗಕ್ಕೆ ತಿಳಿಯುತ್ತಿಲ್ಲ. ಕಣ್ಣಿನ ಪೊರೆಯಿಂದ ಚುನಾವಣಾ ಆಯೋಗಗಕ್ಕೆ ಶಿವಸೇನಾ ಯಾರಿಗೆ ಸೇರಿದ್ದು ಎಂದು ತಿಳಿಯಲಿಲ್ಲ ಎನ್ನಿಸುತ್ತದೆ‘ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಏಕನಾಥ ಶಿಂದೆ ಪ್ರತಿಕ್ರಿಯೆ ನೀಡಿದ್ದಾರೆ.
‘ಶಿವಸೇನಾ ಯಾರಿಗೆ ಸೇರಲಿದೆ ಎಂದು ನಿರ್ಧರಿಸಲು ಪಾಕಿಸ್ತಾನ ಪ್ರಮಾಣ ಪತ್ರ ಬೇಕಿದೆ. ಇದು ಅತ್ಯಂತ ದುರದೃಷ್ಟಕರ ಹಾಗೂ ದುರಂತವಾಗಿದೆ‘ ಎಂದು ತಿರುಗೇಟು ನೀಡಿದ್ದಾರೆ.
ಜೂನ್ 2022ರಲ್ಲಿ ಏಕನಾಥ ಶಿಂದೆ ಮತ್ತು 40 ಶಾಸಕರು ‘ಮಹಾ ವಿಕಾಸ್ ಅಘಾಡಿ‘ ಮೈತ್ರಿ ಸರ್ಕಾರ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದರು. ಆ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಏಕನಾಥ ಶಿಂದೆ ಬಣ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ ನಂತರ ‘ಶಿವಸೇನಾ ಪಕ್ಷ ಮತ್ತು ಪಕ್ಷದ ಚಿಹ್ನೆ‘ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಹಲವು ಗೊಂದಲ ಏರ್ಪಟ್ಟಿತ್ತು. ವರ್ಷದ ಆರಂಭದಲ್ಲಿ, ಚುನಾವಣಾ ಆಯೋಗವು ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನಾ ಎಂದು ಗುರುತಿಸಿ, ಆ ಬಣಕ್ಕೆ ಪಕ್ಷದ ಚಿಹ್ನೆಯನ್ನು ನೀಡಿತ್ತು. '
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.