ನವದೆಹಲಿ: ಮಾಜಿ ಕ್ರೆಕೆಟಿಗ ಹಾಗೂ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಭಾಷೆ ಹಾಗೂ ಆಹಾರದ ವಿಚಾರದಲ್ಲಿ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ‘ನ್ಯೂಸ್ 18’ ವರದಿ ಮಾಡಿದೆ.
ಕಸೌಲಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತಕ್ಕೆ ನಾನು ಹೋದಾಗ ‘ನಮಸ್ಕಾರ’ ಮೊದಲಾದ ಒಂದೆರಡು ಪದಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ಇಡ್ಲಿ ಮೊದಲಾದ ಉಪಾಹಾರ ಸೇವಿಸಿದ್ದೇನೆ. ಆದರೆ ಆ ತಿನಿಸುಗಳನ್ನು ಹೆಚ್ಚುಕಾಲ ಸೇವಿಸಲು ಕಷ್ಟವಾಗುತ್ತದೆ. ಅಲ್ಲಿನ ಸಂಸ್ಕೃತಿಯೇ ಸಂಪೂರ್ಣ ಭಿನ್ನ. ಆದರೆ ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಪಂಜಾಬಿ, ಇಂಗ್ಲಿಷ್ ಭಾಷೆ ಮಾತನಾಡುವುದರಿಂದ ನನಗೆ ಕಷ್ಟವಾಗುವುದಿಲ್ಲ’ ಎಂದು ಸಿಧು ಹೇಳಿದ್ದಾರೆ.
ಅಪ್ಪುಗೆ ಸಮರ್ಥನೆ:ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಾಜ್ವಾ ಅವರನ್ನು ಅಪ್ಪಿಕೊಂಡಿದ್ದಕ್ಕೆ ತಮಗೆ ವಿಷಾದವೇನೂ ಇಲ್ಲ ಎಂದು ಸಿಧು ಪುನರುಚ್ಚರಿಸಿದ್ದಾರೆ. ಇಮ್ರಾನ್ ಖಾನ್ ಪ್ರಮಾಣ ವಚನ ಸಮಾರಂಭಕ್ಕೆ ಪಾಕಿಸ್ತಾನಕ್ಕೆ ಅವರು ಹೋಗಿದ್ದರು. ಪಾಕಿಸ್ತಾನದಲ್ಲಿರುವ ಕರತಾರ್ಪುರ ಗುರುದ್ವಾರಕ್ಕೆ ತೆರಳಲು ಪಂಜಾಬಿ ಸಮುದಾಯಕ್ಕೆ ಕರತಾರ್ಪುರ ಗಡಿಯನ್ನು ಮುಕ್ತಗೊಳಿಸುವುದಾಗಿ ಬಾಜ್ವಾ ಭರವಸೆ ನೀಡಿದ್ದರು. ಇದಕ್ಕಾಗಿ ತಾವು ಅವರನ್ನು ಅಪ್ಪಿಕೊಂಡಿದ್ದೆ ಎಂದು ಸಿಧು ಸಮಜಾಯಿಷಿ ನೀಡಿದ್ದರು. ಒಂದು ವೇಳೆ ಅವರು ನಿಜವಾಗಿಯೂ ಗಡಿಯನ್ನು ಮುಕ್ತಗೊಳಿಸಿದರೆ ಅವರಿಗೆ ಮುತ್ತಿಡುವೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.