ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿ ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿಯು (ಡಿಎಸ್ಜಿಎಂಸಿ) ದೂರು ಸಲ್ಲಿಸಿ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಿದೆ.
ಶಿರೋಮಣಿ ಅಕಾಲಿದಳದ ನಾಯಕ ಮತ್ತು ಡಿಎಸ್ಜಿಎಂಸಿ ಅಧ್ಯಕ್ಷ ಮನ್ಜಿಂದರ್ ಸಿಂಗ್ ಸಿರ್ಸಾ ನೇತೃತ್ವದ ನಿಯೋಗವು ಕಂಗನಾ ವಿರುದ್ಧ ದೂರು ಸಲ್ಲಿಸಿದೆ. ಕಂಗನಾ ಅವರು ರೈತರ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಲಿಸ್ತಾನಿ ಆಂದೋಲನಕ್ಕೆ ಹೋಲಿಸಿದ್ದಾರೆ ಹಾಗೂ ಸಿಖ್ ಸಮುದಾಯವನ್ನು ಖಲಿಸ್ತಾನಿ ಉಗ್ರರು ಎಂದು ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಖಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1984ರಲ್ಲಿ ಮತ್ತು ಅದಕ್ಕೂ ಮೊದಲಿನ ಸಾಮೂಹಿಕ ಹತ್ಯೆ ಮತ್ತು ನರಮೇಧವನ್ನು ನೆನಪಿಸಿಕೊಂಡಿರುವ ಕಂಗನಾ, ಇವು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ವ್ಯಾವಹಾರಿಕ ಮತ್ತು ಯೋಜಿತ ನಡೆ. ಸಿಖ್ ಸಮುದಾಯದವರು ಇಂದಿರಾ ಅವರ ಷೂ ಕೆಳಗೆ ನಲುಗಿದರು ಎಂದು ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.