ನವದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ ಗಡಿಯಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಕೆಲವು ರೈತ ನಾಯಕರಿಗೆ ತಿಳಿದಿತ್ತು ಎಂಬ ಆರೋಪದ ಕುರಿತು ತನಿಖೆ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಸೋಮವಾರ ತಿಳಿಸಿದೆ.
ಈ ಕುರಿತು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಯೋಗೇಂದ್ರ ಯಾದವ್, ‘ಟಿಕ್ರಿ ಗಡಿಯಲ್ಲಿ ಮಹಿಳೆ ಕಾರ್ಯಕರ್ತೆಯ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಕೆಲವು ರೈತ ಮುಖಂಡರಿಗೆ ತಿಳಿದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವರದಿಯನ್ನು ಸುದ್ದಿ ವಾಹಿನಿಗಳ ಮೂಲಕ ತಿಳಿದಿದ್ದೇವೆ. ಆದರೆ ಈ ವರದಿಯನ್ನು ಈಗಲೇ ಖಚಿತಪಡಿಸಲು ಸಾಧ್ಯವಿಲ್ಲ. ಆದರೆ, ಆ ಆರೋಪದ ಕುರಿತು ತನಿಖೆ ನಡೆಸುತ್ತೇವೆ. ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತೇವೆ' ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ ಮಹಿಳಾ ಕಾರ್ಯಕರ್ತರೊಬ್ಬರು ಮೇಲೆ ‘ಕಿಸಾನ್ ಸೋಷಿಯಲ್ ಆರ್ಮಿ' ಸದಸ್ಯರೆಂದು ಹೇಳಿಕೊಂಡವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ವರದಿಗಳ ನಡುವೆ, ‘ನಾವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ' ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
‘ಈಕೆ ದೆಹಲಿಗೆ ಹೋಗುವಾಗ ಮತ್ತು ಟಿಕ್ರಿ ಗಡಿಯನ್ನು ತಲುಪಿದ ನಂತರ, ಇಂಥ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಒಂದು ವಾರದ ನಂತರ, ಆಕೆಗೆ ಜ್ವರ ಹೆಚ್ಚಾಗಿದೆ ಮತ್ತು ಕೋವಿಡ್ 19 ಸೋಂಕು ದೃಢಪಟ್ಟಿದೆ. ನಂತರ ಆಕೆಯನ್ನು ಬಹದ್ದೂರ್ಗಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್ ಸೋಂಕಿನಿಂದ ಆಕೆ ಏಪ್ರಿಲ್ 30ರಂದು ನಿಧನರಾಗಿದ್ದಾರೆ‘ ಎಂದು ಎಸ್ಕೆಎಂ ಸಂಘಟನೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.