ತಿರುವನಂತಪುರ: ‘ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ ಗಾಂಧಿ ಕುಟುಂಬದವರೇ ಐದು ದಶಕಗಳ ಕಾಲ ಗೆದ್ದುಬಂದಿದ್ದರು. ಆದರೂ, ಅವರ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಜನರನ್ನು ತಲುಪಿಲ್ಲ’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಭಾನುವಾರ ಹೇಳಿದರು.
‘ಈ ಕ್ಷೇತ್ರದಿಂದ ಗಾಂಧಿ ಕುಟುಂಬಸ್ಥರು ಚುನಾಯಿತರಾಗಿದ್ದರೂ, ಅವರು ಕ್ಷೇತ್ರದ ಸೇವೆ ಮಾಡಲಿಲ್ಲ ಎಂಬ ಭಾವನೆ ಇಲ್ಲಿನ ಜನರಲ್ಲಿದೆ’ ಎಂದರು.
ಆರ್ಎಸ್ಎಸ್ನ ಅಂಗಸಂಸ್ಥೆ ‘ದೇಶೀಯ ಸೇವಾ ಭಾರತಿ’ ವತಿಯಿಂದ ಇಲ್ಲಿ ಆಯೋಜಿಸಿದ್ದ ‘ಸೇವಾ ಸಮರ್ಪಣ’ ಕಾರ್ಯಕ್ರಮವನ್ನು ಅವರು ವರ್ಚುವಲ್ ವಿಧಾನದ ಮೂಲಕ ಉದ್ಘಾಟಿಸಬೇಕಿತ್ತು. ಆದರೆ, ಇಂಟರ್ನೆಟ್ ಸಂಪರ್ಕ ಸಿಗದ ಕಾರಣ, ಅವರು ತಡವಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
‘ನಾನು ಅಮೇಠಿಯಿಂದ ದೂರವಿರುವ ಊರಲ್ಲಿದ್ದು, ಇಲ್ಲಿ ಇಂಟರ್ನೆಟ್ ಸಂಪರ್ಕ ಸಿಗುತ್ತಿಲ್ಲ. ಈ ಕಾರಣದಿಂದ ಕಾರ್ಯಕ್ರಮದಲ್ಲಿ ನಿಗದಿತ ಸಮಯದೊಳಗೆ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ’ ಎಂದರು.
‘ಇಲ್ಲಿ ಸಮರ್ಪಕ ಇಂಟರ್ನೆಟ್ ಸಂಪರ್ಕ ಪಡೆಯಲು ಸಾಕಷ್ಟು ಹೆಣಗಾಡಬೇಕು. ಅದರಲ್ಲೂ, ಗ್ರಾಮಾಂತರ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕ ಪಡೆಯುವುದು ದೊಡ್ಡ ಸವಾಲೇ ಆಗಿದೆ. ಇದರಿಂದಾಗಿಯೇ ಸೇವಾ ಭಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಸಾಕಷ್ಟು ಪರದಾಡಬೇಕಾಯಿತು. ಗಾಂಧಿ ಕುಟುಂಬಸ್ಥರು ಐದು ದಶಕಗಳ ಕಾಲ ಅಧಿಕಾರದಲ್ಲಿದ್ದರೂ, ಈ ಕ್ಷೇತ್ರದಲ್ಲಿ ಜನರಿಗೆ ಅಭಿವೃದ್ಧಿ ಮರೀಚಿಕೆ ಆಗಿತ್ತು ಎಂಬುದು ಇಂದು ನಿಮಗೆ ಅರ್ಥವಾಗಿರಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.