ADVERTISEMENT

ಸೌರಫಲಕ ಹಗರಣ: ಸರಿತಾ ನಾಯರ್‌ಗೆ 6 ವರ್ಷ ಕಠಿಣ ಸಜೆ

ಪಿಟಿಐ
Published 27 ಏಪ್ರಿಲ್ 2021, 15:11 IST
Last Updated 27 ಏಪ್ರಿಲ್ 2021, 15:11 IST
ಸೌರಫಲಕ ಹಗರಣ
ಸೌರಫಲಕ ಹಗರಣ   

ಕೋಯಿಕ್ಕೋಡ್‌(ಕೇರಳ): ಸೌರಫಲಕ ಹಗರಣದ ಸಂಬಂಧ, ಸರಿತಾ ನಾಯರ್‌ ಅವರಿಗೆ ಕೋಯಿಕ್ಕೋಡ್‌ನ ಕೋರ್ಟ್‌ ಆರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಕೇರಳ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಸರಿತಾ ನಾಯರ್‌ ಎರಡನೇ ಆರೋಪಿಯಾಗಿದ್ದಾರೆ.

ನ್ಯಾಯಾಧೀಶ ಕೆ. ನಿಮ್ಮಿ ಪ್ರಕರಣದ ವಿಚಾರಣೆ ನಡೆಸಿದರು. ಮೂರನೇ ಆರೋಪಿ ಬಿ. ಮಣಿಮೊನ್ ಅವರನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಬಿಜು ರಾಧಾಕೃಷ್ಣ ಅವರಿಗೆ ಸಂಬಂಧಿಸಿ ತೀರ್ಪನ್ನು ತಡೆಹಿಡಿಯಲಾಗಿದೆ.

ADVERTISEMENT

ಸರಿತಾ ನಾಯರ್‌ ಹಾಗೂ ಬಿಜು ರಾಧಾಕೃಷ್ಣನ್‌ ಅವರು, ಟೀಮ್‌ ಸೋಲಾರ್‌ ರಿನ್ಯೂಯೇಬಲ್‌ ಎನರ್ಜಿ ಸೊಲೂಷನ್ಸ್‌ ಕಂಪನಿ ಸ್ಥಾಪಿಸಿದ್ದರು. ಈ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಹಲವರಿಂದ ಹಣ ಪಡೆದು ವಂಚಿಸಿದ ಆರೋಪವಿದೆ. ಕೆಲವರಿಗೆ ಏಜೆನ್ಸಿ ಕೊಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

ಸೌರಫಲಕ ಮಾರಾಟದ ಏಜೆನ್ಸಿ ಕೊಡುವುದಾಗಿ ಹೇಳಿ ತನ್ನಿಂದ ₹ 42.70 ಲಕ್ಷ ಪಡೆದು ಸರಿತಾ ಹಾಗೂ ಬಿಜು ವಂಚಿಸಿದ್ದಾರೆ ಎಂದು 2012ರಲ್ಲಿ ಕೋಯಿಕ್ಕೋಡ್‌ನ ಅಬ್ದುಲ್‌ ಮಜೀದ್‌ ಎಂಬುವವರು ದೂರು ನೀಡಿದ್ದರು. ನಂತರ 2018ರ ಜನವರಿ 25ಕ್ಕೆ ವಿಚಾರಣೆ ಆರಂಭವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.