ಸೇನಾ ಕಾರ್ಯಾಚರಣೆ
– ಪ್ರಜಾವಾಣಿ ಚಿತ್ರ
ಚಂಡೀಗಢ: ‘ಸೇನಾ ಕಾರ್ಯಾಚರಣೆಯಲ್ಲಿ ಸಹ ಸೈನಿಕರಿಂದಲೇ ಹತನಾದರೆ ಅಂಥ ವ್ಯಕ್ತಿಯ ಕುಟುಂಬವು ಶತ್ರುಗಳ ದಾಳಿಯಿಂದ ಮೃತಪಟ್ಟವರಿಗೆ ಸಿಗುವ ಎಲ್ಲಾ ಸೌಲಭ್ಯಗಳಿಗೂ ಅರ್ಹರು’ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ಸಶಸ್ತ್ರ ಪಡೆಗಳ ನ್ಯಾಯಮಂಡಳಿಯು (AFT) 2022ರ ಫೆ. 22ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ‘ಕುಟುಂಬ ಪಿಂಚಣಿ’ಗೆ ಆಗ್ರಹಿಸಿದ ರುಕ್ಮಣಿ ದೇವಿ ಅವರ ಅರ್ಜಿಗೆ ಕೇಂದ್ರ ಸರ್ಕಾರ ಸಹಿತ ಇತರರು ಆಕ್ಷೇಪ ಸಲ್ಲಿಸಿದ್ದರು.
ರುಕ್ಮಿಣಿ ದೇವಿ ಅವರ ಮಗ ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ‘ಆಪರೇಷನ್ ರಕ್ಷಕ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಹ ಸೈನಿಕರಿಂದಲೇ ಹಾರಿದ ಗುಂಡಿಗೆ 1991ರ ಅ. 21ರಂದು ಹುತಾತ್ಮರಾದರು.
ಪಿಂಚಣಿಗಾಗಿ ತಡವಾಗಿ ಅರ್ಜಿ ಹಾಕಿದ್ದನ್ನೂ ಒಳಗೊಂಡು ವಿವಿಧ ಕಾರಣಗಳಿಗೆ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೋರಿದ್ದ ಕೇಂದ್ರದ ಮನವಿಯನ್ನು ನ್ಯಾ. ಅನುಪಿಂದರ್ ಸಿಂಗ್ ಗ್ರೆವಾಲ್ ಮತ್ತು ದೀಪಕ್ ಮಂಚಂಡ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿತು.
‘ಯಾವುದೇ ಕಾರ್ಯಾಚರಣೆ ಸಂದರ್ಭದಲ್ಲಿ ಸೈನಿಕ, ಸಹೋದ್ಯೋಗಿ ಗುಂಡೇಟಿನಿಂದ ಮೃತಪಟ್ಟರೆ ಅಂಥವರ ಕುಟುಂಬದವರು ಸರ್ಕಾರದಿಂದ ಲಭಿಸಬೇಕಾದ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು’ ಎಂದು ಪೀಠ ಅಭಿಪ್ರಾಯಪಟ್ಟಿತು.
1991ರಲ್ಲಿ ಸೈನಿಕ ಮೃತಪಟ್ಟರೂ ಪಿಂಚಣಿಗಾಗಿ 2018ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸಲ್ಲಿಸುವಲ್ಲಿ ವಿಳಂಬವಾಗಿದೆ ಎಂಬ ಕೇಂದ್ರದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ‘ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧನಿಗೆ ಪ್ರತಿ ತಿಂಗಳು ಪಿಂಚಣಿ ಸಿಗಬೇಕು’ ಎಂದು ಹೈಕೋರ್ಟ್ ಒತ್ತಿ ಹೇಳಿದೆ.
ಕುಟುಂಬ ಪಿಂಚಣಿಯನ್ನು ಕೋರಿರುವ ರುಕ್ಮಿಣಿ ದೇವಿ ಅವರ ಬೇಡಿಕೆಯು ಸಾಮಾನ್ಯ ಪಿಂಚಣಿಗಿಂತ ಅಧಿಕವಾದದ್ದು ಎಂದು ಎಎಫ್ಟಿಯು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಿತ್ತು. ಆದರೆ ರುಕ್ಮಿಣಿ ದೇವಿ ಅವರ ಪ್ರಕರಣ ವಿಭಿನ್ನವಾದದ್ದು. ಇದನ್ನು ಬೇರೆ ರೀತಿಯಲ್ಲೇ ಪರಿಗಣಿಸಬೇಕು ಎಂದೆನ್ನಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.