ನವದೆಹಲಿ: ಸಮಾನ ಮನಸ್ಕ ಪಕ್ಷಗಳನ್ನು ಒಂದುಗೂಡಿಸುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಯತ್ನವನ್ನು ಸ್ವಾಗತಿಸಿರುವ ಕಾಂಗ್ರೆಸ್ನ ಹಿರಿಯ ಮುಖಂಡ ಕಪಿಲ್ ಸಿಬಲ್, ‘ಇದೇ ವೇಳೆ ಪಕ್ಷವನ್ನೂ ಬಲಪಡಿಸಬೇಕು. ಇದು ಸಾಧ್ಯವಾಗದೇ ಯಾವುದೇ ವಿರೋಧಪಕ್ಷಗಳ ಒಗ್ಗೂಡುವಿಕೆ ಅಸಾಧ್ಯ’ ಎಂದು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕವಾಗಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿ ಪತ್ರಬರೆದಿದ್ದ ತಾವು ಸೇರಿ ಪಕ್ಷದ 23 ನಾಯಕರು, ಪಕ್ಷಕ್ಕೆ ಪುನಃಶ್ಚೇತನ ನೀಡಬೇಕು ಮತ್ತು ಬಲಪಡಿಸಬೇಕು ಎಂಬ ಹಕ್ಕೊತ್ತಾಯವನ್ನು ಮಂಡಿಸುತ್ತಲೇ ಇರುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಪುನಃಶ್ಚೇತನಗೊಳಿಸುವ ಯಾವುದೇ ಯತ್ನಗಳಿಗೆ ನಾನು ಮತ್ತು ಪಕ್ಷದ ನನ್ನ ಸಹೋದ್ಯೋಗಿಗಳು ಪೂರ್ಣ ಬೆಂಬಲ ನೀಡಲಿದ್ದೇವೆ. ಇದು ನನ್ನ ಪ್ರಶ್ನೆಯಲ್ಲ. ಕಾಂಗ್ರೆಸ್ ಪಕ್ಷವನ್ನು ಪುನಃಶ್ಚೇತನಗೊಳಿಸಿ, ವಿರೋಧಪಕ್ಷಗಳ ಒಕ್ಕೂಟದ ಮುಂಚೂಣಿಗೆ ಬರುವಂತೆ ಬಲಪಡಿಸುವುದು ಈಗಿನ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪಕ್ಷವನ್ನು ಬಲಪಡಿಸದೇ ವಿರೋಧಪಕ್ಷಗಳ ಒಗ್ಗೂಡುವಿಕೆಯ ಯತ್ನ ಕೈಗೂಡುವುದಿಲ್ಲ. ಪಕ್ಷವು ಹೊಂದಿದ್ದ ನಾಯಕತ್ವ, ಉನ್ನತಿಯನ್ನು ಮುಖಂಡರು ಅರ್ಥೈಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.
ದೇಶದಲ್ಲಿ ವಿರೋಧಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಗಾಂಧಿ ಅವರು ಆಗಸ್ಟ್ 20ರಂದು ವರ್ಚುವಲ್ ಸ್ವರೂಪದಲ್ಲಿ ಸಭೆ ನಡೆಸಲು ಸಿದ್ಧತೆ ನಡೆಸಿರುವ ಹೊತ್ತಿನಲ್ಲಿಯೇ ಸಿಬಲ್ ಈ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.