ನವದೆಹಲಿ: ಭಾರತದ ಪರಿಸರ ನಿಯಮಗಳಿಗೆ ಅಪಾಯತಂದೊಡ್ಡುವಂತಹ ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ–2020’ಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ, ಆ ಕರಡು ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣಾ ಅಧಿಸೂಚನೆ 2020 ಕುರಿತು ಪ್ರಕಟಣೆಯಾಗಿರುವ ಲೇಖನವೊಂದರಲ್ಲಿ ಸೋನಿಯಾ ಗಾಂಧಿ ಅವರು, ‘ಸರ್ಕಾರದ ಈ ಅಧಿಸೂಚನೆ ಕುರಿತು ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಇದರಲ್ಲಿರುವ ಅಂಶಗಳು ಭಾರತದ ಪರಿಸರ ನಿಯಮಗಳಿಗೆ ವಿರುದ್ಧವಾಗಿವೆ. ಮೊದಲು ಸರ್ಕಾರ ಈ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು. ನಂತರ, ಸಾರ್ವಜನಿಕ ಸಮಾಲೋಚನೆ ಮೂಲಕ ಈ ಅಧಿಸೂಚನೆಯನ್ನು ರಾಷ್ಟ್ರೀಯ ಕಾರ್ಯಸೂಚಿಯನ್ನಾಗಿಸಬೇಕು. ಈ ಮೂಲಕ ಭಾರತ, ಜಾಗತಿಕ ತಾಪಮಾನ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.
ಇದನ್ನು ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ‘ಪ್ರಕೃತಿ ಮಾತೆಯನ್ನು ನಾವು ರಕ್ಷಿಸಿದರೆ, ಆಕೆ ನಮ್ಮನ್ನು ರಕ್ಷಿಸುತ್ತಾಳೆ’ ಎಂದು ಅಡಿ ಬರಹ ಬರೆದಿದ್ದಾರೆ. ಜತೆಗೆ, ‘ಈ ಅಧಿಸೂಚನೆಯನ್ನು ತಕ್ಷಣ ಸರ್ಕಾರ ಹಿಂಪಡೆಯಬೇಕು’ ಎಂದು ಹೇಳುವ ಮೂಲಕ ಸೋನಿಯಾ ಗಾಂಧಿಯವರ ಒತ್ತಾಯವನ್ನು ಅನುಮೋದಿಸಿದ್ದಾರೆ.
ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ‘ಇದು ಕರಡು ಅಧಿಸೂಚನೆ. ಇದೇ ಅಂತಿಮವಲ್ಲ. ಈ ಅಧಿಸೂಚನೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಸಾರ್ವಜನಿಕರಿಂದ ಸಾವಿರಾರು ಸಲಹೆಗಳು ವ್ಯಕ್ತವಾಗಿವೆ’ ಎಂದು ಹೇಳಿದ್ದಾರೆ.ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದ ಈ ಅಧಿಸೂಚನೆಗೆ ಸಾರ್ವಜನಿಕ ವಲಯದಿಂದ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.