ADVERTISEMENT

ಯೋಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಎಸ್‌ಪಿ ಶಾಸಕನ ಪೆಟ್ರೋಲ್‌ ಪಂಪ್‌ ಧ್ವಂಸ

ಪಿಟಿಐ
Published 7 ಏಪ್ರಿಲ್ 2022, 13:18 IST
Last Updated 7 ಏಪ್ರಿಲ್ 2022, 13:18 IST
ಬರೇಲಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪರ್ಸಖೇಡಾದಲ್ಲಿನ ಪೆಟ್ರೋಲ್‌ ಪಂಪ್‌ ಅನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುತ್ತಿರುವುದು (ಪಿಟಿಐ)
ಬರೇಲಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪರ್ಸಖೇಡಾದಲ್ಲಿನ ಪೆಟ್ರೋಲ್‌ ಪಂಪ್‌ ಅನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುತ್ತಿರುವುದು (ಪಿಟಿಐ)   

ಬರೇಲಿ: ಸಮಾಜವಾದಿ ಪಕ್ಷದ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿ ಎಂಬುವವರು ಅಕ್ರಮವಾಗಿ ನಿರ್ಮಿಸಿದ್ದಾರೆ ಎನ್ನಲಾದ ಪೆಟ್ರೋಲ್ ಪಂಪ್‌ ಅನ್ನು ಗುರುವಾರ ಧ್ವಂಸಗೊಳಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಗುರಿಯಾಗಿಸಿಕೊಂಡುಶಾಸಕ ಅನ್ಸಾರಿ ಇತ್ತೀಚೆಗೆ ಪ್ರಚೋದನಕಾರಿ ಹೇಳಿಕೆನೀಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಅನ್ಸಾರಿ ಅವರ ಪೆಟ್ರೋಲ್‌ ಪಂಪ್‌ ಧ್ವಂಸಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬರೇಲಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪರ್ಸಖೇಡಾದಲ್ಲಿನ ಪೆಟ್ರೋಲ್‌ ಪಂಪ್‌ ಅನ್ನು ಬುಲ್ಡೋಜರ್ ಬಳಸಿ ಬರೇಲಿ ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ಕೆಡವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಡಿಎ ಉಪಾಧ್ಯಕ್ಷ ಜೋಗೇಂದ್ರ ಸಿಂಗ್ ಮಾತನಾಡಿ, ಅನ್ಸಾರಿ ಅವರ ಪೆಟ್ರೋಲ್ ಪಂಪ್ ಅಕ್ರಮ. ಈ ಸಂಬಂಧ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಉತ್ತರ ಬಂದಿರಲಿಲ್ಲ ಎಂದು ತಿಳಿಸಿದರು.

ADVERTISEMENT

ಸರ್ಕಾರದವಿರುದ್ಧ ಅನ್ಸಾರಿ ಇತ್ತೀಚೆಗೆ ನೀಡಿದ್ದ ಹೇಳಿಕೆಸಂಬಂಧ ಬರೇಲಿಯ ಬರದರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಕಳೆದ ಶುಕ್ರವಾರ ತಮ್ಮ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಅನ್ಸಾರಿ, ‘ವಿಧಾನಸಭೆಯಲ್ಲಿ ನಮ್ಮ ಪಕ್ಷದ ಬಲ ಹೆಚ್ದಾಗಿದೆ. ಆದಿತ್ಯನಾಥ್ ಸದ್ದು ಮಾಡಿದರೆ, ಎಸ್‌ಪಿ ಬಂದೂಕುಗಳು ಕೇವಲ ಹೊಗೆ ಹೊರಸೂಸುವುದಿಲ್ಲ, ಬದಲಿಗೆ ಬುಲೆಟ್‌ಗಳು ಹಾರಲಿವೆ’ ಎಂದು ಹೇಳಿದ್ದರು.

ಇದಾಗಿ ವಾರ ಕಳೆಯುವುದರ ಒಳಗಾಗಿ ಅನ್ಸಾರಿ ಅವರ ಪೆಟ್ರೋಲ್‌ ಪಂಪ್‌ ಅನ್ನು ಸ್ಥಳೀಯ ಪ್ರಾಧಿಕಾರ ಧ್ವಂಸಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.