ನವದೆಹಲಿ: ಮಧುಮೇಹ ಇರುವ ಗಗನಯಾನಿಗಳು ಶೀಘ್ರವೇ ಸುರಕ್ಷಿತವಾಗಿ ಬಾಹ್ಯಾಕಾಶಯಾನ ಕೈಗೊಳ್ಳಬಹುದು ಎಂದು ಸಂಶೋಧನೆಯೊಂದರಲ್ಲಿ ದೃಢಪಟ್ಟಿದೆ. ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲಾಗಿದೆ.
‘ಆಕ್ಸಿಯಂ–4’ ಯೋಜನೆ ಸಂದರ್ಭದಲ್ಲಿ ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಆರೋಗ್ಯ ಸಂಸ್ಥೆ ‘ಬುರ್ಜಿ ಹೋಲ್ಡಿಂಗ್ಸ್’, ಮಧುಮೇಹ ಮೇಲ್ವಿಚಾರಣೆ ಮಾಡುವ ವಾಣಿಜ್ಯ ಸಾಧನಗಳ ಪರಿಣಾಮ ಮತ್ತು ಸುರಕ್ಷತೆ ಬಗ್ಗೆ ಅಧ್ಯಯನ ನಡೆಸಿತ್ತು. ಭೂಮಿಯ ಮೇಲೆ ಲಕ್ಷಾಂತರ ಮಧುಮೇಹಿಗಳು ನಿತ್ಯ ಬಳಸುವ ಸಾಧನಗಳನ್ನು ಅಂತರಿಕ್ಷ ಯಾನ ಕೈಗೊಳ್ಳುವ ಮಧುಮೇಹಿಗಳ ಆರೋಗ್ಯದ ಸಮಗ್ರ ಮೇಲ್ವಿಚಾರಣೆಗೂ ಬಳಕೆ ಮಾಡುಬಹುದು ಎಂದು ಸಂಶೋಧನೆಯಲ್ಲಿ ದೃಢಪಟ್ಟಿದೆ.
‘ಈ ಸಂಶೋಧನೆಯಿಂದ ಮಧುಮೇಹ ಇರುವ ಬಾಹ್ಯಾಕಾಶ ಯಾನಿಗಳಿಗೆ ಬಾಗಿಲೊಂದು ತೆರೆದಂತಾಗುತ್ತದೆ. ದೊಡ್ಡ ಸಮಸ್ಯೆಯೊಂದಕ್ಕೆ ಇದು ಪರಿಹಾರ ಒದಗಿಸಿದೆ’ ಎಂದು ಬುರ್ಜಿ ಹೋಲ್ಡಿಂಗ್ ಹೇಳಿಕೆಯಲ್ಲಿ ತಿಳಿಸಿದೆ.
ಶುಕ್ಲಾ ಮತ್ತು ಇತರ ಮೂವರು ಅಂತರಿಕ್ಷಯಾನಿಗಳು ಜೂನ್ 25ರಿಂದ ಜುಲೈ 15ರವರೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದು, ಸೂಕ್ಷ್ಮ ಗುರುತ್ವಕ್ಕೆ ಸಂಬಂಧಿಸಿದ ಸುಮಾರು 60 ಪ್ರಯೋಗಗಳನ್ನು ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.