ಚೆನ್ನೈ: ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶವನ್ನು ಮುಂದೂಡಿದ ರಾಜ್ಯಪಾಲ ಜಗದೀಪ್ ಧನಕರ್ ಅವರ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಟೀಕಿಸಿದ್ದು, ಇದು ಇಬ್ಬರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಶಿಫಾರಸಿನಂತೆ ರಾಜ್ಯಪಾಲ ಧನಕರ್ ಅವರು ಶನಿವಾರ ವಿಧಾನಸಭೆ ಅಧಿವೇಶವನ್ನು ಮುಂದೂಡಿದ್ದರು.
ಆದರೆ, ಈ ಬಗ್ಗೆ ಟ್ವೀಟ್ ಮಾಡಿರುವ ಸ್ಟಾಲಿನ್, ‘ಯಾವುದೇ ನಿಯಮಗಳನ್ನು ಪಾಲಿಸದೇ ಅಧಿವೇಶವನ್ನು ಮುಂದೂಡಲಾಗಿದೆ. ಉನ್ನತ ಹುದ್ದೆಯಲ್ಲಿ ಇರುವವರು ಶಿಷ್ಟಾಚಾರ ಪಾಲನೆ ಮಾಡಬೇಕು. ಅವರ ಈ ಕ್ರಮ ಸ್ಥಾಪಿತ ನಿಯಮ– ವಿಧಾನಗಳಿಗೆ ವಿರುದ್ಧವಾದುದು’ ಎಂದು ಹೇಳಿದ್ದಾರೆ.
‘ರಾಜ್ಯಪಾಲರು ರಾಜ್ಯವೊಂದರ ಸಾಂಕೇತಿಕ ಮುಖ್ಯಸ್ಥರಾಗಿರುತ್ತಾರೆ. ಸಂವಿಧಾನವನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಅವರು ಇತರರಿಗೆ ಮಾದರಿಯಾಗಿರಬೇಕು’ ಎಂದೂ ಸ್ಟಾಲಿನ್ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ರಾಜ್ಯಪಾಲ ಧನಕರ್, ‘ಈ ವಿಷಯದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಯ ಗಮನ ಸೆಳೆಯುವುದು ಸಮಯೋಚಿತ ಅನಿಸುತ್ತದೆ. ಅವರ ಅಭಿಪ್ರಾಯಗಳು ಬಹಳ ಕಟುವಾಗಿದ್ದು, ನೋವನ್ನುಂಟು ಮಾಡುವಂಥವು ಹಾಗೂ ಆಧಾರರಹಿತವೂ ಆಗಿವೆ. ರಾಜ್ಯ ಸರ್ಕಾರದ ಮನವಿಯಂತೆ ಅಧಿವೇಶನವನ್ನು ಮುಂದೂಡಲಾಗಿದೆ’ ಎಂದು ಹೇಳಿದ್ದಾರೆ.
ಅಧಿವೇಶನವನ್ನು ಮುಂದೂಡುವಂತೆ ಕೋರಿ ರಾಜ್ಯ ಸರ್ಕಾರ ಕಳುಹಿಸಿದ್ದ ಪತ್ರವನ್ನು ಅವರು ತಮ್ಮ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಜಟಾಪಟಿ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿಯ ವಕ್ತಾರ ಕುನಾಲ್ ಘೋಷ್, ‘ರಾಜ್ಯಪಾಲರು ಈ ಬಗ್ಗೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿಲ್ಲ. ಸಂಪುಟದ ಶಿಫಾರಸಿನಂತೆ ಅವರು ಅಧಿವೇಶನವನ್ನು ಮುಂದೂಡಿದ್ದು, ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.