ಕೊಯಮತ್ತೂರು: ‘ಭ್ರಷ್ಟಾಚಾರ ಕುರಿತು ತಮ್ಮ ಜೊತೆಗೆ ನೇರ ಚರ್ಚೆಗೆ ಬನ್ನಿ’ ಎಂದು ಡಿಎಂಕೆ ಅಧ್ಯಕ್ಷ ಎಂ.ಸ್ಟಾಲಿನ್ ಅವರಿಗೆ ಮತ್ತೆ ಸವಾಲು ಹಾಕಿರುವ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ‘ಸ್ಟಾಲಿನ್ ಒಬ್ಬ ಅಸಮರ್ಥ ನಾಯಕ’ ಎಂದು ಟೀಕಿಸಿದ್ದಾರೆ.
‘ಸ್ಟಾಲಿನ್ ಅವರಿಗೆ ಎಐಎಡಿಎಂಕೆ ಅನ್ನು ನೇರವಾಗಿ ಎದುರಿಸುವ ಧೈರ್ಯವಿಲ್ಲ. ಜನರಿಗೆ ಸುಳ್ಳು ಭರವಸೆ ಕೊಡುವ ಹಾಗೂ ಆಡಳಿತ ಪಕ್ಷವನ್ನು ಟೀಕಿಸುವ ಮೂಲಕ ಅವರ ಗಮನಸೆಳೆಯಲು ಬಯಸುತ್ತಿದ್ದಾರೆ’ ಎಂದು ಪಳನಿಸ್ವಾಮಿ ಆರೋಪಿಸಿದರು.
‘ತಿಂಗಳ ಹಿಂದೆ ಗ್ರಾಮ ಸಭೆಯೊಂದರಲ್ಲಿ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಲು ಸ್ಟಾಲಿನ್ ಅವರಿಗೆ ಆಗಲಿಲ್ಲ. ಡಿಎಂಕೆಯ 13 ಮಂದಿ ಮಾಜಿ ಸಚಿವರ ಮೇಲೆ ಭ್ರಷ್ಟಾಚಾರ ಆರೋಪವಿದೆ. ಸ್ಟಾಲಿನ್ ಅವರು ಭ್ರಷ್ಟಾಚಾರ ಕುರಿತು ಚರ್ಚಿಸಲು ಬಯಸುತ್ತಿದ್ದಾರೆ’ ಎಂದೂ ಮುಖ್ಯಮಂತ್ರಿ ವ್ಯಂಗ್ಯವಾಡಿದರು.
ನಾನು ಕೆಳಹಂತದಿಂದ ಬಂದು ಮುಖ್ಯಮಂತ್ರಿ ಆಗಿದ್ದೇನೆ. ಅವರ ತಂದೆ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಆಗಿದ್ದರು ಎಂದು ಅವರು ಆ ಸ್ಥಾನದಲ್ಲಿದ್ದಾರೆ. ಎಐಎಡಿಎಂಕೆ ನಾಯಕರಾಗಿದ್ದ ಎಂ.ಜಿ.ರಾಮಚಂದ್ರನ್, ಜಯಲಲಿತಾ ಜನರಿಗಾಗಿ ಹೋರಾಡಿದರು. ಆದರೆ ಅವರ ತಂದೆ ಕುಟುಂಬಕ್ಕಾಗಿ ಹೋರಾಡಿದರು ಎಂದು ಮುಖ್ಯಮಂತ್ರಿ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.