ADVERTISEMENT

ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ: ಸುಳಿವು ನೀಡಿದ ಸಚಿವೆ ನಿರ್ಮಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2022, 5:53 IST
Last Updated 6 ನವೆಂಬರ್ 2022, 5:53 IST
   

ನವದೆಹಲಿ: ಕೇಂದ್ರಾಡಳಿತ ಪ‍್ರದೇಶವಾಗಿರುವ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸುಳಿವು ನೀಡಿದ್ದಾರೆ.

‘ಸಹಕಾರ ಒಕ್ಕೂಟ ವ್ಯವಸ್ಥೆಯಲ್ಲಿ ಆತ್ಮ ನಿರ್ಭರ ಭಾರತವನ್ನಾಗಿಸಲು ಕೇಂದ್ರ ಹಾಗೂ ‌ರಾಜ್ಯಗಳ ಸಂಬಂಧ‘ ಎನ್ನುವ ಸಮಾವೇಶದಲ್ಲಿ ಮಾತ‌ನಾಡಿದ ಅವರು ಈ ಬಗ್ಗೆ ಸುಳಿವು ನೀಡಿದ್ದಾರೆ.

‘ಹಣಕಾಸು ಆಯೋಗದ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿದ್ದಾರೆ. ಹೀಗಾಗಿ ಸಂಗ್ರಹವಾದ ತೆರಿಗೆಯಿಂದ ರಾಜ್ಯಗಳಿಗೆ ನೀಡುತ್ತಿದ್ದ ಶೇ 42 ರಷ್ಟು ಪಾಲನ್ನು ಶೇ 41ಕ್ಕೆ ಇಳಿಕೆ ಮಾಡಲಾಗಿದೆ. ಯಾಕೆಂದರೆ ಜಮ್ಮು ಕಾಶ್ಮೀರ ಈಗ ರಾಜ್ಯವಾಗಿ ಉಳಿದಿಲ್ಲ. ಅದು ಶೀಘ್ರವೇ ರಾಜ್ಯವಾಗಲಿದೆ. ಅದಕ್ಕೆ ಸಮಯ ಹಿಡಿಯಬಹುದು’ ಎಂದು ಅವರು ಹೇಳಿದ್ದಾರೆ.

ADVERTISEMENT

14ನೇ ಹಣಕಾಸು ಆಯೋಗದ ವರದಿ‌ಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಂಚಿಕೆಯಾಗುವ ಪಾಲಿನ ಬಗ್ಗೆ ಮಾತನಾಡುವಾಗ ಅವರು ಈ ಸುಳಿವನ್ನು ನೀಡಿದ್ದಾರೆ.

ಸ್ವಾತಂತ್ರ್ಯ ಬಳಿಕ ರಾಜಾ ಹರಿಸಿಂಗ್‌ ಭಾರತದ ಒಕ್ಕೂಟ ಸೇರಿದ ಬಳಿಕ ಕಾಶ್ಮೀ‌ರಕ್ಕೆ ಸಂವಿಧಾನದ 370ನೇ ಪರಿಚ್ಛೇದದಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಇದನ್ನು 2019ರ ಅಕ್ಟೋಬರ್‌ 31 ರಂದು ರದ್ದು ಮಾಡಿ, ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಎಂದು ಎರಡು ಭಾಗ ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.