ಪ್ರಕಾಶ್ ಅಂಬೇಡ್ಕರ್
ಪಿಟಿಐ ಚಿತ್ರ
ಮುಂಬೈ: ಪರ್ಭಣಿ ಹಿಂಸಾಚಾರ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಪೊಲೀಸ್ ಮಹಾನಿರೀಕ್ಷಕ ಶಾಜಿ ಉಮಾಪ್ ಅವರೊಂದಿಗೆ ಮಾತನಾಡಿರುವುದಾಗಿ ವಂಚಿತ್ ಬಹುಜನ ಅಘಾಡಿ ಪಕ್ಷದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ತಿಳಿಸಿದ್ದಾರೆ.
‘ದಲಿತರ ಬಂಧನವನ್ನು ಮತ್ತು ಅವರ ಸ್ಥಳಗಳ ಮೇಲೆ ಕೊಂಬಿಂಗ್ ಕಾರ್ಯಾಚರಣೆ ನಡೆಸುವುದನ್ನು ತಕ್ಷಣ ನಿಲ್ಲಿಸುವಂತೆ ನಾನು ಒತ್ತಾಯಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.
ದಲಿತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕೆಂದು ಇದೇ ವೇಳೆ ಮನವಿ ಮಾಡಿದ್ದಾರೆ.
‘ಶುಕ್ರವಾರ ಮಧ್ಯಾಹ್ನ 12 ಗಂಟೆಯೊಳಗೆ ವಿಧ್ವಂಸಕ ಕೃತ್ಯ ಎಸಗಿದ ದುಷ್ಕರ್ಮಿಗಳ ಬಂಧನವಾಗಬೇಕು. ಇಲ್ಲವಾದಲ್ಲಿ ಮುಂದೆ ಏನು ಮಾಡಬೇಕೆಂಬುವುದನ್ನು ತಿಳಿಸುತ್ತೇನೆ’ ಎಂದೂ ಪ್ರಕಾಶ್ ಅಂಬೇಡ್ಕರ್ ಎಚ್ಚರಿಸಿದ್ದಾರೆ.
ಘಟನೆ ಏನು?
ಪರ್ಭಣಿ ರೈಲು ನಿಲ್ದಾಣದ ಆವರಣದಲ್ಲಿನ ಅಂಬೇಡ್ಕರ್ ಮೂರ್ತಿಯ ಬಳಿ ಇರಿಸಲಾಗಿದ್ದ ಸಂವಿಧಾನದ ಪ್ರತಿಕೃತಿಯನ್ನು ದುಷ್ಕರ್ಮಿಗಳು ಮಂಗಳವಾರ ಧ್ವಂಸಗೊಳಿಸಿದ್ದರು.
ಈ ಕೃತ್ಯವನ್ನು ಖಂಡಿಸಿ ಮುಂಬೈನ ಪರ್ಭಣಿ ನಗರದಲ್ಲಿ ನಡೆಸಿದ ಪ್ರತಿಭಟನೆಯು ಬುಧವಾರ ಹಿಂಸಾಚಾರಕ್ಕೆ ತಿರುಗಿತ್ತು.
ಘಟನೆಗೆ ಸಂಬಂಧ ಈಗಾಗಲೇ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.