ADVERTISEMENT

ರೈತರು, ಶ್ರಮಿಕರ ವಿರೋಧದಿಂದ ಮೋದಿ ಪದಚ್ಯುತಿ ಖಚಿತ –ರಾಹುಲ್‌

ಪಿಟಿಐ
Published 12 ಆಗಸ್ಟ್ 2021, 14:56 IST
Last Updated 12 ಆಗಸ್ಟ್ 2021, 14:56 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ (ಪಿಟಿಐ): ‘ದೇಶದಲ್ಲಿ ದಲಿತರು, ರೈತರು, ಶ್ರಮಿಕರ ಧ್ವನಿಯಿಂದ ಮೂಡುವ ಬಿರುಗಾಳಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದರು.

ಜನರು ದೇಶದಲ್ಲಿನ ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ. ನೀವು ಯಾವುದೇ ಪಡೆಗೆ ಹೆದರುವ ಅಗತ್ಯವಿಲ್ಲ. ಈ ಸವಾಲನ್ನು ಎದುರಿಸಿ ಎಂದು ಧೈರ್ಯ ತುಂಬುವ ಕೆಲಸವನ್ನಷ್ಟೇ ನಾವು ಮಾಡಬೇಕಾಗಿದೆ ಎಂದು ಹೇಳಿದರು.

‘ದೇಶದಲ್ಲಿ ಈಗ ದಲಿತರು, ರೈತರು ಮತ್ತು ಶ್ರಮಿಕರ ಮಾತುಗಳು ಕೇಳಿಬರುತ್ತಿವೆ. ದಿನೇ ದಿನೇ ಇದು ಹೆಚ್ಚುತ್ತಿದೆ. ಬಿರುಗಾಳಿಯಾಗಿಯೂ ಬದಲಾಗಲಿದೆ. ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದೆ’ ಎಂದು ಹೇಳಿದರು.

ADVERTISEMENT

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಜಂತರ್‌ ಮಂತರ್ ಬಳಿ ಪಕ್ಷದ ಪರಿಶಿಷ್ಟ ಜಾತಿ, ಪಂಗಡ ವಿಭಾಗವು ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ನೀವು ಯಾರಿಗೂ ಹೆದರುವ ಅಗತ್ಯವಿಲ್ಲ ಎಂಬ ಭರವಸೆಯ ಜೊತೆಗೆ ಡಾ.ಅಂಬೇಡ್ಕರ್, ಮಹಾತ್ಮಾಗಾಂಧಿ ಅವರ ಮಾತುಗಳನ್ನು ಈ ವರ್ಗಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದರು.

ದಲಿತರು, ರೈತರು ಮತ್ತು ಶ್ರಮಿಕರಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಮಾತನಾಡಲು ನಮಗೆ ಸರ್ಕಾರ ಅವಕಾಶವನ್ನೇ ನೀಡುವುದಿಲ್ಲ. ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಶ್ರಮಿಕರಿಗೆ ನೆರವಾಗಿ ಎಂದು ನಾವು ಕೇಳಿದ್ದೆವು. ಆದರೆ, ಮೋದಿ ಅವರು ನಾಲ್ಕಾರು ಉದ್ಯಮಿಗಳಿಗೆ ನೀಡಿದರು. ಇತರರಿಗೆ ಏನೂ ಸಿಗಲಿಲ್ಲ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.